ಪುತ್ತೂರು ಎಪ್ರಿಲ್ 18: ಅಲ್ಲಿ ಎಲ್ಲಿ ಕಣ್ಣು ಹರಿಸಿದರೂ ಜನಗಳ ಗುಂಪೇ ತುಂಬಿ ತುಳುಕುತ್ತಿತ್ತು. ಎಲ್ಲೆಲ್ಲೂ ಮಹಾಲಿಂಗೇಶ್ವರ ಎನ್ನುವ ಕೂಗು ಕಿವಿಗಪ್ಪಳಿಸುತ್ತಿತ್ತು. ಹೌದು ಇದು ಇತಿಹಾಸ ಪ್ರಸಿದ್ಧ ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ಅತ್ಯಂತ ಸಂಭ್ರಮ,ಸಡಗರದಿಂದ ನೆರವೇರಿದ ಕ್ಷಣ. ಬ್ರಹ್ಮರಥೋತ್ಸವದಲ್ಲಿ ಭಾಗಿಯಾದ ಲಕ್ಷಾಂತರ ಭಕ್ತ ಸಮೂಹ ಪಾಲ್ಗೊಳ್ಳುವ ಮೂಲಕ ರಥಾರೂಢನಾದ ಪುತ್ತೂರಿನ ಮುತ್ತು ಮಹಾಲಿಂಗೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದಾರೆ.

ದೇವಸ್ಥಾನದ ಒಳಾಂಗಣ ಮತ್ತು ಹೊರಾಂಗಣದಲ್ಲಿ ವಿವಿಧ ಸುತ್ತು ಬಲಿ ನಡೆಸ ಬಳಿಕ ದೇವರಿಗೆ ದೇವರ ರಥಬೀದಿಯಲ್ಲಿ ರಥೋತ್ಸವ ನಡೆಯಿತು. ಮಹಾಲಿಂಗೇಶ್ವರ ಸ್ವಾಮಿಗೆ ಹಲವು ಸುತ್ತುಗಳ ಬಲಿ ಸೇವೆ ನಡೆಯುತ್ತಿದ್ದು, ಚೆಂಡೆ ನಾದಗಳ ಮೂಲಕ ಸ್ವಾಮಿಯ ಸುತ್ತುಬಲಿ, ಶಂಖ-ಜಾಗಟೆಗಳ ಸುತ್ತುಬಲಿ, ಸೇರಿದಂತೆ ಹಲವು ಪ್ರಾಕಾರಗಳಲ್ಲಿ ದೇವರಿಗೆ ಸುತ್ತು ಬಲಿ ನೆರವೇರುತ್ತದೆ.

ತಿರುವಾಳು ಮೆರವಣೆಗೆಯ ಮೂಲಕ 3 ಕಿಲೋಮೀಟರ್ ದೂರದ ಬಲ್ನಾಡಿನಿಂದ ಸ್ವಾಮಿಯ ಜಾತ್ರೆ ನೋಡಲೆಂದ ಕ್ಷೇತ್ರಕ್ಕೆ ಆಗಮಿಸಿದ್ದ ಉಳ್ಳಾಲ್ತಿ,ದಂಡನಾಯಕ ದೈವಗಳು ಮೆರವಣಿಗೆಯ ಮೂಲಕ, ಮಹಾಲಿಂಗೇಶ್ವರ ಸ್ವಾಮಿಯ ಜೊತೆಯಲ್ಲೇ ರಥದ ಕಡೆಗೆ ಮೆರವಣೊಗೆಯಲ್ಲಿ ಆಗಮಿಸುತ್ತದೆ. ಉಳ್ಳಾಲ್ತಿ-ದಂಡನಾಯಕ ಸಪರಿವಾರದ ದೈವಗಳಲ್ಲಿ ಒಂದಾದ ಕಾಜು ಕುಜುಂಬ ದೈವರು ದೇವರಲ್ಲಿ ರಥೋತ್ಸವ ನೆರವೇರಿಸಲು ಅಪ್ಪಣೆಯನ್ನು ಕೇಳುತ್ತದೆ.

ಅದೇ ಪ್ರಕಾರ ಸ್ವಾಮಿಯು ದೈವಕ್ಕೆ ರಥೋತ್ಸವ ನೆರವೇರಿಸಲು ಅಪ್ಪಣೆ ನೀಡಿದ ಬಳಿಕ ದೇವರು ರಥವನ್ನು ಏರುತ್ತಾರೆ. ರಥೋತ್ಸವ ಸಂಪನ್ನಗೊಂಡ ಬಳಿಕ ಮಹಾಲಿಂಗೇಶ್ವರ ಸ್ವಾಮಿಯು ತನ್ನ ಜಾತ್ರೆಗೆ ಅತಿಥಿಯಾಗಿ ಆಗಮಿಸಿದ ಉಳ್ಳಾಲ್ತಿ ದೈವವನ್ನು ಬಲ್ನಾಡಿಗೆ ಬೀಳ್ಕೊಡಲು ಹೋಗುವ ಸಂಪ್ರದಾಯವೂ ಕ್ಷೇತ್ರದಲ್ಲಿದೆ. ಅಲ್ಲದೆ ಎಪ್ರಿಲ್ 28 ಕ್ಕೆ ಉಳ್ಳಾಲ್ತಿ ದೈವದ ಕ್ಷೇತ್ರವಾದ ಬಲ್ನಾಡಿನಲ್ಲಿ ದೈವಗಳ ನೇಮೋತ್ಸವ ನಡೆಯಲಿದ್ದು, ಮಹಾಲಿಂಗೇಶ್ವರ ಸ್ವಾಮಿಯನ್ನು ದೈವಗಳು ನೇಮೋತ್ಸವಕ್ಕೆ ಆಗಮಿಸುವಂತೆ ಬೇಡಿಕೊಳ್ಳುವ ಕಟ್ಟುಪಾಡಗಳೂ ಇಲ್ಲಿದೆ. ಭಕ್ತಾಧಿಗಳು ಹರಕೆ ರೂಪದಲ್ಲಿ ಬ್ರಹ್ಮರಥ ಸೇವೆಯನ್ನು ನೆರವೇರಿಸುತ್ತಿದ್ದು, ಈ ಬಾರಿ ಸುಮಾರು 75 ಕ್ಕೂ ಮಿಕ್ಕಿದ ರಥೋತ್ಸವ ಸೇವೆಗಳು ನಡೆದಿದೆ. ಈ ಬಾರಿ ಪ್ರತೀ ರಥೋತ್ಸವ ಸೇವೆಗೆ 25 ಸಾವಿರ ರೂಪಾಯಿಗಳನ್ನು ನಿಗದಿ ಮಾಡಲಾಗಿದೆ.
ರಥದಲ್ಲಿ ಸ್ವಾಮಿಯು ಆರೂಢನಾದ ಬಳಿಕ ದೇವರ ಮುಂದೆ ಆಕರ್ಷಕ ಸುಡುಮದ್ದುಗಳ ಪ್ರದರ್ಶನವೂ ಏರ್ಪಡುತ್ತದೆ. ವಿವಿಧ ಪ್ರಕಾರದ ಸುಡುಮದ್ದುಗಳ ವೀಕ್ಷಣೆಗಾಗಿಯೇ ಜಾತಿ-ಮತ-ಭೇಧವಿಲ್ಲದೆ ಜನ ಇಲ್ಲಿಗೆ ಆಗಮಿಸುತ್ತಾರೆ.