DAKSHINA KANNADA
ಎಪ್ರಿಲ್ 10 ರಿಂದ 20 ರವರೆಗೆ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೆ: ಸಾಂಪ್ರದಾಯಿಕ ಉಡುಗೆಗಳಿಗೆ ಮಾತ್ರ ಅವಕಾಶ
ಪುತ್ತೂರು, ಎಪ್ರಿಲ್ 07: ದಕ್ಷಿಣಕನ್ನಡ ಜಿಲ್ಲೆಯ ಹೆಸರಾಂತ ಶಿವಕ್ಷೇತ್ರ ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎಪ್ರಿಲ್ 10 ರಿಂದ 20 ರವರೆಗೆ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಹೇಳಿದರು.
ಎಪ್ರಿಲ್ 10 ರಂದು ಬೆಳಿಗ್ಗೆ 9.25 ಕ್ಕೆ ಧ್ವಜಾರೋಹಣ ನೆರವೇರಲಿದ್ದು, ಎಪ್ರಿಲ್ 16 ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಭೇಟಿ, ಎಪ್ರಿಲ್ 17 ರಂದು ಸಿಡಿಮದ್ದು ಪ್ರದರ್ಶನ ಹಾಗು ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ನಡೆಯಲಿದೆ ಎಂದರು.
ಈ ಬಾರಿ ದೇವರ ಪುಷ್ಕರಣಿಯಲ್ಲಿ ವರುಣ ದೇವರ ವಿಗ್ರಹದ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಪುಷ್ಕರಣಿಯಲ್ಲಿ ಇಳಿಯುವ ಭಕ್ತಾಧಿಗಳಿಗೆ ಕಡ್ಡಾಯ ವಸ್ತಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಕೇವಲ ಸಾಂಪ್ರದಾಯಿಕ ಉಡುಗೆಯಲ್ಲಿ ಬರುವ ಭಕ್ತಾಧಿಗಳಿಗೆ ಮಾತ್ರ ವರುಣ ದೇವರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದ ಅವರು ದೇವರ ಬ್ರಹ್ಮರಥ ಎಳೆಯುವ ಸೇವಾಕರ್ತರಿಗೂ ವಸ್ತ್ರಸಂಹಿತೆ ಕಡ್ಡಾಯವಾಗಿದೆ.
ಜಾತ್ರೆ ನಡೆಯುವ ಹತ್ತು ದಿನವೂ ಭಕ್ತಾಧಿಗಳು ಸಾಂಪ್ರದಾಯಿಕ ಉಡುಗೆಯಲ್ಲೇ ದೇವಸ್ಥಾನಕ್ಕೆ ಬರಬೇಕು ಎನ್ನುವುದು ಸಮಿತಿಯ ಆಗ್ರಹವಾಗಿದೆ ಎಂದು ಅವರು ಹೇಳಿದರು.
You must be logged in to post a comment Login