DAKSHINA KANNADA
ಯುವತಿ ಗರ್ಭವತಿ ಪ್ರಕರಣ – ಪುತ್ತೂರು ಶಾಸಕರ ಮಧ್ಯಸ್ತಿಕೆಯಲ್ಲಿ ಪ್ರಕರಣವನ್ನು ಇತ್ಯರ್ಥಗೊಳಿಸಲು ವಿಶ್ವಕರ್ಮ ಸಂಘಟನೆ ಒತ್ತಾಯ

ಪುತ್ತೂರು ಜುಲೈ 02: ತನ್ನ ಸಹಪಾಠಿಯಾಗಿರುವ ವಿಧ್ಯಾರ್ಥಿನಿಯನ್ನು ಮದುವೆಯಾಗುವುದಾಗಿ ಒಪ್ಪಿಸಿ ದೈಹಿಕ ಸಂಪರ್ಕ ನಡೆಸಿ ಒಂದು ಮಗು ಕರುಣಿಸಿದ ಪ್ರಕರಣಕ್ಕೆ ಇದೀಗ ಸಂತ್ರಸ್ತೆಯ ಜಾತಿ ಸಂಘಟನೆಗಳು ಎಂಟ್ರಿಕೊಟ್ಟಿದ್ದು, ಪ್ರಕರಣದ ಮಧ್ಯಸ್ತಿಕೆ ವಹಿಸಿದ ಪುತ್ತೂರು ಶಾಸಕರೇ ಈ ಪ್ರಕರಣವನ್ನು ಇತ್ಯರ್ಥಪಡಿಸಬೇಕೆಂದು ವಿಶ್ವಕರ್ಮ ಸಂಘಟನೆ ಒತ್ತಾಯಿಸಿದೆ.
ಪುತ್ತೂರಿನ ಬಪ್ಪಳಿಗೆ ನಿವಾಸಿಯಾಗಿರುವ ಕೃಷ್ಣ.ಜೆ.ರಾವ್ ಎನ್ನುವ ಯುವಕ ಮತ್ತು ಸಂತ್ರಸ್ರೆ ಯುವತಿ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರೂ ಹಲವು ಬಾರಿ ಆರೋಪಿ ಕೃಷ್ಣ.ಜೆ.ರಾವ್ ಮನೆಯಲ್ಲಿ ದೈಹಿಕ ಸಂಪರ್ಕವನ್ನೂ ಮಾಡಿಕೊಂಡಿದ್ದಾರೆ.ಈ ನಡುವೆ ಯುವತಿ ಗರ್ಭವತಿಯಾದ ವಿಚಾರ ಮನೆ ಮಂದಿಗೆ ತಿಳಿದಿದೆ.ಯುವತಿಯ ಪೋಷಕರಿಗೆ ಈ ವಿಚಾರ ತಿಳಿದ ಸಂದರ್ಭದಲ್ಲಿ ಯುವತಿ 7 ತಿಂಗಳ ಗರ್ಭಿಣಿಯಾಗಿದ್ದಳು. ಆರೋಪಿ ಕೃಷ್ಣ.ಜೆ.ರಾವ್ ಸಂತ್ರಸ್ತೆಯನ್ನು ಮದುವೆಯಾಗಲು ನಿರಾಕರಿಸಿದ ಹಿನ್ನಲೆಯಲ್ಲಿ ಯುವತಿ ಪೋಷಕರು ಆರೋಪಿ ವಿರುದ್ಧ ಪೋಲೀಸರಿಗೆ ದೂರು ನೀಡಲು ಮುಂದಾಗಿ ಪುತ್ತೂರು ಮಹಿಳಾ ಪೋಲೀಸ್ ಠಾಣೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಆರೋಪಿಯ ತಂದೆ ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಕೂಡಾ ಠಾಣೆಗೆ ಆಗಮಿಸಿದ್ದರು. ಆರೋಪಿ ತಂದೆ ಶಾಸಕ ಅಶೋಕ್ ಕುಮಾರ್ ರೈ ಗೆ ಕರೆ ಮಾಡಿ ಪ್ರಕರಣ ಬಗ್ಗೆ ಮಾಹಿತಿಯನ್ನು ನೀಡಿದ್ಷರು. ಆ ಸಂದರ್ಭದಲ್ಲಿ ಯುವತಿಯ ತಾಯಿಗೆ ದೂರು ನೀಡಿದಂತೆ ಸೂಚಿಸಿದ್ದರಲ್ಲದೆ, ಆರೋಪಿಗೆ 21 ವರ್ಷ ತುಂಬಿದ ಬಳಿಕ ಮದುವೆ ಮಾಡುವ ಭರವಸೆಯನ್ನೂ ನೀಡಿದ್ದರು.

ಈ ನಡುವೆ ಜೂನ್ 23 ಕ್ಕೆ ಆರೋಪಿಗೆ 21 ವರ್ಷ ತುಂಬಿದ ಕಾರಣ, ಯುವತಿಯ ಪೋಷಕರು ಮಗಳನ್ನು ಮದುವೆಯಾಗುವಂತೆ ಆರೋಪಿಗೆ ತಿಳಿಸಿದ್ದರು. ಆದರೆ ಆರೋಪಿ ತಲೆಮರೆಸಿಕೊಂಡ ಹಿನ್ನಲೆಯಲ್ಲಿ ಯುವತಿ ಪೋಷಕರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ಸಂತ್ರಸ್ತೆಯ ಜಾತಿ ಸಂಘಟನೆಯಾದ ವಿಶ್ವಕರ್ಮ ಸಂಘಟನೆ ಮೊದಲು ಮಧ್ಯಸ್ತಿಕೆ ವಹಿಸಿದ್ದ ಶಾಸಕರೇ ಈ ಮದುವೆಯನ್ನು ಮಾಡಿಸಬೇಕೆಂದು ಒತ್ತಾಯಿಸಲಾರಂಭಿಸಿದೆ. ಶಾಸಕರ ಸೂಚನೆ ಕಾರಣಕ್ಕಾಗಿ ಯುವಕನ ಮೇಲಿನ ದೂರನ್ನು ಯುವತಿ ಪೋಷಕರು ಹಿಂಪಡೆದಿದ್ದರು. ಆದರೆ ಬಳಿಕ ಆರೋಪಿ ಮದುವೆಗೆ ಒಪ್ಪಿಕೊಳ್ಳದ ಕಾರಣಕ್ಕೆ ಶಾಸಕರೇ ಈ ಮದುವೆ ಮಾಡಿಸಬೇಕೆಂದು ಸಂಘಟನೆ ಮನವಿಯನ್ನೂ ಮಾಡಿದೆ