ಪುತ್ತೂರು: ಖರೀದಿ ಮಾಡಿದ ವಾಹನದಲ್ಲಿ ನಿರಂತರ ತಾಂತ್ರಿಕ ದೋಷ, ರೂ.7,50,321 ನ್ನು 6 % ಬಡ್ಡಿದರದಲ್ಲಿ ಹಿಂದಿರುಗಿಸಲು ವಾಹನ ತಯಾರಕ ಕಂಪನಿ ಮತ್ತು ವಿತರಕರಿಗೆ ಗ್ರಾಹಕ ನ್ಯಾಯಾಲಯ ಆದೇಶ ನೀಡಿದೆ.

ಅಶೋಕ್ ಲೇಲ್ಯಾಂಡ್ ಕಂಪನಿಯ ತಯಾರಿಕೆಯ ವಾಹನ ಬಡಾ ದೋಸ್ತ್ ವಾಹನವನ್ನು ಖರೀದಿಸಿದ ನಂತರ ನಿರಂತರವಾಗಿ ವಾಹನದಲ್ಲಿ ಸಮಸ್ಯೆಗಳು ಉಂಟಾದ ಕಾರಣ ದ.ಕ. ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಕೆಯಾದ ಪ್ರಕರಣದಲ್ಲಿ ನ್ಯಾಯಾಲಯವು ದೂರುದಾರರ ದೂರನ್ನು ಮಾನ್ಯ ಮಾಡಿ ಸದರಿ ವಾಹನದಲ್ಲಿ ತಯಾರಿಕೆಯ ದೋಷ ಇದೆ ಎಂಬುದನ್ನು ಎತ್ತಿ ಹಿಡಿದಿದೆ.
ಗ್ರಾಹಕರಾದ ಪುತ್ತೂರಿನ ಪದ್ಮನಾಭ ಪ್ರಭು ಎಂಬವರು 20 21ರಲ್ಲಿ ಖರೀದಿಸಿದ ಬಡಾ ದೋಸ್ತ್ ವಾಹನ ನಿರಂತರವಾಗಿ ಸೆನ್ಸಾರ್ ಹಾಳಾಗುವಿಕೆ, ಲೋ ಪಿಕ್ಅಪ್, ಹಾಳಾಗುವಿಕೆ ಉಂಟಾದ ಸಮಸ್ಯೆಗಳನ್ನು ಎದುರಿಸಿದ್ದರು. ಈ ಬಗ್ಗೆ ಅವರು 20 22 ರಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. ಅದೇ ರೀತಿ ತಜ್ಞರಿಂದ ವಾಹನದ ಪರಿಶೀಲನೆಗೆ ಕೂಡ ಅರ್ಜಿ ಸಲ್ಲಿಸಲಾಗಿತ್ತು. ಈ ದೂರಿನಲ್ಲಿ ವಾಹನದ ತಯಾರಿಕಾ ಸಂಸ್ಥೆಯಾದ ಅಶೋಕ ಲ್ಯಾಂಡ್ ಹಾಗೂ ಡೀಲರ್ ಗಳಾದ ಮಂಗಳೂರಿನ ಕಾಂಚನ ಆಟೋಮೊಟಿವ್ ಸಂಸ್ಥೆ ಮತ್ತು ಅದರ ಪುತ್ತೂರು ಶಾಖೆಗಳನ್ನು ಪ್ರತಿವಾದಿಗಳೆಂದು ಹೆಸರಿಸಲಾಗಿತ್ತು. ದೂರುದಾರರ ಮತ್ತು ಪ್ರತಿವಾದಿಗಳ ಸಾಕ್ಷಿ ವಿಚಾರಣೆ ನಡೆದ ನಂತರ ವಾದಗಳನ್ನು ಆಲಿಸಿ ಗ್ರಾಹಕರ ನ್ಯಾಯಾಲಯ ಸದ್ರಿ ವಾಹನದಲ್ಲಿ ತಯಾರಿಕ ದೋಷ ಇದೆ ಎಂಬ ದೂರುದಾರರ ವಾದವನ್ನು ಎತ್ತಿ ಹಿಡಿದಿದೆ.
ಆದುದರಿಂದ ಪ್ರತಿವಾದಿಗಳಾದ ಅಶೋಕ್ ಲೇಲ್ಯಾಂಡ್ ಕಂಪನಿ ಮತ್ತು ಕಾಂಚನ ಆಟೋಮೊಟಿವ್ ಸಂಸ್ಥೆಗಳು ದೂರುದಾರರಿಗೆ ವಾಹನದ ವೆಚ್ಚ ರೂ. 7, 5 0, 3 2 1 ಮೊತ್ತವನ್ನು ಶೇಕಡ 6 ಬಡ್ಡಿದರದಲ್ಲಿ ಹಿಂದಿರುಗಿಸುವಂತೆ ಆದೇಶ ನೀಡಿದೆ.
ಸದರಿ ಬಡ್ಡಿಯನ್ನು ದೂರಿನ ದಿನಾಂಕದಿಂದ (20 22 ಇಸವಿಯಿಂದ) ಪರಿಗಣಿಸಲು ಆದೇಶ ನೀಡಿದೆ. ಇದರ ಜೊತೆಗೆ ಪ್ರತಿವಾದಿಗಳು ದೂರುದಾರರಿಗೆ ಆದ ಸೇವಾ ನ್ಯೂನ್ಯತೆ ಮಾನಸಿಕ ರೂ.25000 ಹಾಗೂ ವ್ಯಾಜ್ಯ ವೆಚ್ಚವಾಗಿ 10000 ನೀಡಲು ಆದೇಶ ನೀಡಿದೆ.
ದೂರುದಾರರ ಪರವಾಗಿ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ಪುತ್ತೂರಿನ ಎಚ್ ಅಂಡ್ ಡಿ ಲೀಗಲ್ ನ ನ್ಯಾಯವಾದಿಗಳಾದ ಹರೀಶ್ ಕುಮಾರ್ ಬಳಕ್ಕ, ದೀಪಕ್ ಬೋಳುವಾರು, ಭುವನೇಶ್ವರಿ ಎಂ., ರಕ್ಷಿತಾ ಬಂಗೇರ ವಾದಿಸಿದ್ದರು.