DAKSHINA KANNADA
ಪುತ್ತೂರು: ಹಿರೇಬಂಡಾಡಿಯ ಆಶಾ ಕಾರ್ಯಕರ್ತೆ ಭವ್ಯ ಹೆರಿಗೆ ವೇಳೆ ರಕ್ತಸ್ರಾವದಿಂದ ಮೃತ್ಯು.
ಪುತ್ತೂರು, ಜೂನ್ 21: ಹಿರೇಬಂಡಾಡಿ ಗ್ರಾಮದ ಮುರ ಕಾಲೋನಿ ನಿವಾಸಿ, ಬಾಲಕೃಷ್ಣ ಗೌಡ ಎಂಬವರ ಪತ್ನಿ, ಹಿರೇಬಂಡಾಡಿ ಗ್ರಾಮದ ಆಶಾ ಕಾರ್ಯಕರ್ತೆ ಭವ್ಯ (28) ಜೂ. 20ರಂದು ರಾತ್ರಿ ಹೆರಿಗೆ ಸಂದರ್ಭದಲ್ಲಿ ತೀವ್ರ ರಕ್ತಸ್ರಾವ ಉಂಟಾಗಿ ಮೃತಪಟ್ಟಿದ್ದಾರೆ. ಹಸುಗೂಸು ಗಂಡು ಮಗು ಆರೋಗ್ಯವಾಗಿರುವುದಾಗಿ ತಿಳಿದು ಬಂದಿದೆ.
ಭವ್ಯರವರದ್ದು 3ನೇ ಹೆರಿಗೆಯಾಗಿದ್ದು, ಸೋಮವಾರ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ರಾತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಯಾಗುತ್ತಲೇ ತೀವ್ರ ರೀತಿಯಲ್ಲಿ ರಕ್ತಸ್ರಾವ ಉಂಟಾಗಿದ್ದು, ಇದನ್ನು ತಡೆಗಟ್ಟುವ ಚಿಕಿತ್ಸೆಯಿಂದ ಪ್ರಯೋಜನವಾಗದ ಕಾರಣ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿ ಚಿಕಿತ್ಸೆ ನೀಡಲಾಗಿದ್ದು, ಅಲ್ಲಿಯೂ ಚಿಕಿತ್ಸೆ ಫಲಕಾರಿ ಆಗದೆ ಜೂ. 21ರಂದು ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತಿ ಬಾಲಕೃಷ್ಣ ಗೌಡ, 4ನೇ ತರಗತಿ ಕಲಿಯುತ್ತಿರುವ ಪುತ್ರ ಭವಿಷ್, 3ನೇ ತರಗತಿಯ ಸ್ವಸ್ತಿಕ್ ಮತ್ತು ಹಸುಗೂಸು ಗಂಡು ಮಗುವನ್ನು ಅಗಲಿದ್ದಾರೆ.
You must be logged in to post a comment Login