LATEST NEWS
ಕಾಂಗ್ರೇಸ್ ಅಭ್ಯರ್ಥಿ ಆಯ್ಕೆಯಲ್ಲಿ ಬಿಲ್ಲವ ಸಮುದಾಯಕ್ಕೆ ಅನ್ಯಾಯವಾದರೆ ನಮ್ಮ ದಾರಿ ನಮಗೆ – ಪ್ರಣವಾನಂದ ಸ್ವಾಮೀಜಿ
ಮಂಗಳೂರು ಮಾರ್ಚ್ 27: ಇಷ್ಟು ದಿನ ಆಡಳಿತರೂಢ ಬಿಜೆಪಿ ಸರಕಾರದ ವಿರುದ್ದ ಕಿಡಿಕಾರುತ್ತಿದ್ದ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಇದೀಗ ಕಾಂಗ್ರೇಸ್ ವಿರುದ್ದ ಕಿಡಿಕಾರಲು ಆರಂಭಿಸಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೇಸ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಬಿಲ್ಲವ ಸಮುದಾಯಕ್ಕೆ ಅನ್ಯಾಯ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ನ ಮೊದಲನೇ ಪಟ್ಟಿಯಲ್ಲಿ ಬಿಲ್ಲವ, ನಾಮಧಾರಿ, ಈಡಿಗ ಸಮುದಾಯಕ್ಕೆ ಅನ್ಯಾಯವಾಗಿದೆ. ಎರಡನೇ ಪಟ್ಟಿಯಲ್ಲಿಯೂ ಅನ್ಯಾಯವಾದರೆ ನಮ್ಮ ದಾರಿ ನಮಗೆ ಎಂದು’ ಎಂದು ಎಚ್ಚರಿಸಿದರು. ಬಿಲ್ಲವ ಸಮುದಾಯದ ಮತದಾರರು ಅತ್ಯಧಿಕ ಸಂಖ್ಯೆಯಲ್ಲಿರುವ ಕ್ಷೇತ್ರಗಳಲ್ಲಿ ಬಿಲ್ಲವ ಅಭ್ಯರ್ಥಿಗಳಿಗೆ ಅವಕಾಶ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ಗೆ ಮತ್ತೆ ಹಕ್ಕೊತ್ತಾಯ ಮಾಡಲಾಗಿದೆ. ಮಂಗಳೂರು ದಕ್ಷಿಣ ಕ್ಷೇತ್ರ ಸೇರಿದಂತೆ ಬಿಲ್ಲವ ಮತಗಳು ಹೆಚ್ಚು ಇರುವ ಕ್ಷೇತ್ರಗಳಲ್ಲಿ ಸಮುದಾಯಕ್ಕೆ ಅವಕಾಶ ನೀಡದಿದ್ದಲ್ಲಿ ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ಗಾಗಿ 11ಕ್ಕೂ ಹೆಚ್ಚು ಮಂದಿ ₹ 2 ಲಕ್ಷ ಕಟ್ಟಿ ಅರ್ಜಿ ಹಾಕಿದ್ದರೂ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಮಾಜಿ ಮೇಯರ್ಗಳು ಸೇರಿದಂತೆ ಹಲವು ಹುದ್ದೆಗಳಲ್ಲಿ ಕೆಲಸ ಮಾಡಿದವರು ಅರ್ಜಿ ಹಾಕಿದ್ದರು. ರಾಜ್ಯದಲ್ಲಿ ಎಲ್ಲ ಪಕ್ಷಗಳು ಬಿಲ್ಲವ ಸಮುದಾಯಕ್ಕೆ ತಲಾ 10 ಸ್ಥಾನ ನೀಡಬೇಕು ಎಂದು ಎಲ್ಲ ಪಕ್ಷಗಳಿಗೆ ಆಗ್ರಹ ಮಾಡಲಾಗಿದೆ ಎಂದು ತಿಳಿಸಿದರು.
You must be logged in to post a comment Login