Connect with us

    DAKSHINA KANNADA

    ಪಿ.ಎಫ್ ಅಪ್ರೂವಲ್ ಗೆ ಸತಾಯಿಸುತ್ತಿದ್ದ ಶೋರೂಂ ಮಾಲಕ, ಪ್ರಶ್ನಿಸಿದ ಮಾಜಿ ನೌಕರನ ಮೇಲೆ ಹಲ್ಲೆ ಆರೋಪ…..

    ಪುತ್ತೂರು, ನವಂಬರ್ 26: ಪಿ.ಎಫ್.ಹಣದ ಅಪ್ರೋವಲ್ ಮಾಡುವಂತೆ ಕೇಳಿದ ಮಾಜಿ ನೌಕರನೋರ್ವನಿಗೆ ಸಂಸ್ಥೆಯ ಮಾಲಕ ಹಲ್ಲೆ ನಡೆಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರಿನ ಬೊಳುವಾರಿನಲ್ಲಿರುವ ತಿರುಮಲ ಹೋಂಡಾ ಎನ್ನುವ ದ್ವಿಚಕ್ರ ವಾಹನಗಳ ಶೋರೂಂ ನಲ್ಲಿ ಈ ಘಟನೆ ನಡೆದಿದ್ದು, ಶೋ ರೂಂ ಮಾಲಕ ಎನ್.ಕೃಷ್ಣಕುಮಾರ್ ಹಾಗೂ ಆತನ ಮಗ ಅಖಿಲೇಶ್ ಸೇರಿ ಮಾಜಿ ನೌಕರ ರಂಜಿತ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

    ರಂಜಿತ್ ಕಳೆದ ಮೂರು ತಿಂಗಳ ಹಿಂದೆಯೇ ಸಂಸ್ಥೆಗೆ ರಾಜೀನಾಮೆ ನೀಡಿದ್ದು, ತನ್ನ ಪಿ.ಎಫ್ ಹಣಕ್ಕೆ ಅಪ್ರೂವಲ್ ನೀಡುವಂತೆ ಸಂಸ್ಥೆಯ ಮಾಲಕರಲ್ಲಿ ಹಲವು ಬಾರಿ ಮನವಿ ಮಾಡಿದರೂ ನಿರಂತರವಾಗಿ ಸತಾಯಿಸುತ್ತಿದ್ದರು ಎಂದು ರಂಜಿತ್ ಆರೋಪಿಸಿದ್ದಾರೆ. ಈ ಸಂಬಂಧ ನೇರವಾಗಿ ಮಾಲಕರನ್ನು ಮನವಿ ಮಾಡಲು ಶೋರೂಂ ಗೆ ತೆರಳಿದ್ದ ಸಂದರ್ಭದಲ್ಲಿ ವಿನಾ ಕಾರಣ ತನ್ನ ಮೇಲೆ ಮಾಲಕ ಎನ್.ಕೃಷ್ಣಕುಮಾರ್ ಹಾಗೂ ಆತನ ಮಗ ಅಖಿಲೇಶ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

    ಈ ಸಂಬಂಧ ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶೋ ರೂಂ ಮಾಲಕ ಎನ್.ಕೃಷ್ಣಕುಮಾರ್ ರಂಜಿತ್ ಮೇಲೆಯೂ ದೂರು ನೀಡಿದ್ದು, ಶೋ ರೂಂ ಗೆ ನುಗ್ಗಿ ದಾಂಧಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ.

    ಶೋ ರೂಂ ಮಾಲಕ ಎನ್.ಕೃಷ್ಣಕುಮಾರ್ ಸಂಸ್ಥೆಯಲ್ಲಿ ದುಡಿಯುತ್ತಿರುವ ನೌಕರರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಿದ್ದಾರೆ ಎನ್ನುವ ಆರೋಪವೂ ಇದೆ. ಶೋ ರೂಂ ಕಟ್ಟಡವನ್ನು ಅವೈಜ್ಞಾನಿಕವಾಗಿ ಕಟ್ಟಿದ ಪರಿಣಾಮ ಈ ಹಿಂದೆ ಕಟ್ಟಡದ ಮೇಲೆ ಮಣ್ಣು ಕುಸಿದು ಶೋ ರೂಂ ನಲ್ಲಿ ದುಡಿಯುತ್ತಿರುವ ನೌಕರರು ಪ್ರಾಣಾಪಾಯದಿಂದ ಪಾರಾಗಿದ್ದರು. ಶೋ ರೂಂ ಗೆ ಬಂದ ರಂಜಿತ್ ಮೇಲೆ ಮಾಲಕ ಎನ್. ಕೃಷ್ಣಕುಮಾರ್ ಹರಿಹಾಯ್ದಿರುವುದಕ್ಕೆ ಸಾಕ್ಷಿಯಾಗಿ ಧ್ವನಿ ಮುದ್ರಣವೊಂದೂ ರಂಜಿತ್ ಬಳಿಯಿದ್ದು, ಈ ಆಧಾರದ ಮೇಲೆ ಪೋಲೀಸರು ಶೋರೂಂ ಮಾಲಕನ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply