LATEST NEWS
ನರ್ಸ್ ನಿಮಿಷಾ ಪ್ರಿಯಾ ಮರಣದಂಡನೆ – ಇತರ ರಾಷ್ಟ್ರಗಳಂತೆ ಯೆಮೆನ್ ಅಲ್ಲ ನಾವೇನು ಮಾಡಲು ಸಾಧ್ಯವಿಲ್ಲ ಕೇಂದ್ರ ಸರಕಾರ

ನವದೆಹಲಿ ಜುಲೈ 14: ಯೆಮೆನ್ನಲ್ಲಿ ಜುಲೈ 16 ರಂದು ಮರಣದಂಡನೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಪ್ರಕರಣದ ಕುರಿತಂತೆ ನಾವೇನು ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್ ಗೆ ತಿಳಿಸಿದೆ. ನರ್ಸ್ ನಿಮಿಷಾ ಪ್ರಿಯಾ ಅವರನ್ನು ಶಿಕ್ಷೆಯಿಂದ ಪಾರು ಮಾಡುವ ಈವರೆಗಿನ ಎಲ್ಲಾ ಯತ್ನಗಳು ವಿಫಲವಾಗಿವೆ ಎಂದು ಕೇಂದ್ರ ಸರಕಾರ ಹೇಳಿದೆ.
ಜುಲೈ 16 ರಂದು ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಅವರನ್ನು ರಕ್ಷಿಸುವಂತೆ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರಕಾರ ಜಗತ್ತಿನ ಇತರ ರಾಷ್ಟ್ರಗಳಂತೆ ಯೆಮೆನ್ ಅಲ್ಲ. ಆ ರಾಷ್ಟ್ರದೊಂದಿಗೆ ರಾಜತಾಂತ್ರಿಕ ಮಾತುಕತೆ ಅಷ್ಟು ಸುಲಭವಲ್ಲ. ಹೀಗಾಗಿ ಇದಕ್ಕಿಂತ ಹೆಚ್ಚಿನದನ್ನು ಕೇಂದ್ರ ಸರ್ಕಾರ ಮಾಡಲು ಸಾಧ್ಯವಿಲ್ಲ’ ಎಂದು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ರಾ ಅವರಿದ್ದ ಪೀಠಕ್ಕೆ ತಿಳಿಸಿದರು.

ಮಾತುಕತೆ ಸೇರಿದಂತೆ ಗಲ್ಲು ಶಿಕ್ಷೆಯಿಂದ ನಿಮಿಷಾ ಅವರನ್ನು ಪಾರು ಮಾಡಲು ಇರುವ ಎಲ್ಲಾ ಮಾರ್ಗಗಳನ್ನು ಕಂಡುಕೊಳ್ಳಲು ಪ್ರಯತ್ನಿಸಲಾಯಿತು. ಆದರೆ, ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಶಿಕ್ಷೆಯನ್ನು ಅಮಾನತಿನಲ್ಲಿಡುವಂತೆ ಮಾಡಿದ ಮನವಿಗೂ ಅಲ್ಲಿಂದ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ’ ಎಂದು ಹೇಳಿದರು. ಈ ಬಗ್ಗೆ ಅಲ್ಲಿನ ಪ್ರಭಾವಿ ಶೇಖ್ ಒಬ್ಬರ ಬಳಿಯೂ ಮಾತುಕತೆ ನಡೆಸಲಾಯಿತು. ಆದರೆ ಅದು ಫಲಪ್ರದವಾಗಲಿಲ್ಲ. ಕೊನೆಯದಾಗಿ ಸಂಧಾನಕ್ಕೆ ಪ್ರಯತ್ನಿಸಿಲಾಯಿತು. ಹೆಚ್ಚಿನ ಬ್ಲಡ್ ಮನಿ(ಕ್ಷಮೆಗಾಗಿ ಪರಿಹಾರ) ನೀಡಲು ವ್ಯವಸ್ಥೆ ಮಾಡಿದಾದರೂ ಗೌರವದ ಪ್ರಶ್ನೆ ಎಂದು ಮೃತನ ಕುಟುಂಬ ಅದನ್ನು ತೆಗೆದುಕೊಳ್ಳಲು ನಿರಾಕರಿಸಿದೆ’ ಎಂದು ತಿಳಿಸಿದರು.