LATEST NEWS
ಉಡುಪಿ – ಇನ್ನು ಮುಂದೆ ಹಗಲು ಹೊತ್ತಿನಲ್ಲಿ ಶವದ ಮುಖ ತೋರಿಸಿ ನಂತರ ಹಸ್ತಾಂತರ

ಉಡುಪಿ ಅಗಸ್ಟ್ 24: ಕುಂದಾಪುರದ ಕೊರೊನಾ ಸೊಂಕಿತ ವ್ಯಕ್ತಿಯ ಶವ ಅದಲು ಬದಲಾದ ನಂತರ ಉಡುಪಿ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಇನ್ನು ಮುಂದೆ ಹಗಲು ಹೊತ್ತಿನಲ್ಲಿ ಶವದ ಮುಖ ತೋರಿಸಿದ ನಂತರವೇ ಶವ ಹಸ್ತಾಂತರ ಮಾಡಲು ನಿರ್ಧರಿಸಿದೆ.
ಈ ಕುರಿತಂತೆ ಮಾಹಿತಿ ನೀಡಿದ ಉಡುಪಿ ಶಾಸಕ ರಘುಪತಿ ಭಟ್ ಕುಂದಾಪುರ ತಾಲ್ಲೂಕಿನ 60 ವರ್ಷದ ಕೋವಿಡ್ ಸೋಂಕಿತ ವ್ಯಕ್ತಿಯ ಶವ ಅದಲು ಬದಲಾದ ಪ್ರಕರಣದಲ್ಲಿ ಜಿಲ್ಲಾ ಆಸ್ಪತ್ರೆಯ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲು ಗೃಹ ಸಚಿವರ ಜತೆ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.
ಶವ ಅದಲು ಬದಲು ಪ್ರಕರಣ ಗಂಭೀರವಾಗಿದ್ದು, ಜಿಲ್ಲಾಡಳಿತ ತಲೆ ತಗ್ಗಿಸುವಂತಾಗಿದೆ. ಮುಂದೆ, ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರವಹಿಸಲು ಗೃಹ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅದರಂತೆ, ಶವ ಹಸ್ತಾಂತರ ವೇಳೆ ಕಡ್ಡಾಯವಾಗಿ ಪಾಲಿಸಬೇಕಾದ ಕ್ರಮಗಳ ಕುರಿತು ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.

ಇನ್ನು ಮುಂದೆ ಕೋವಿಡ್ನಿಂದ ಮೃತಪಟ್ಟವರ ಶವವನ್ನು ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಮಾತ್ರ ಹಸ್ತಾಂತರಿಸಲು ನಿರ್ಧರಿಸಲಾಗಿದೆ. ಶವ ಕೊಡುವಾಗ ಸಂಬಂಧಪಟ್ಟ ತಾಲ್ಲೂಕಿನ ವೈದ್ಯಕೀಯ ಅಧಿಕಾರಿ ಹಾಜರಿರಬೇಕು. ಅಂತ್ಯಕ್ರಿಯೆ ಮುಗಿಯುವವರೆಗೂ ಉಪಸ್ಥಿತರಿರಬೇಕು. ಶವವನ್ನು ಕುಟುಂಬ ಸದಸ್ಯರಿಗೆ ತೋರಿಸಿ ಅವರಿಂದ ದೃಢೀಕರಣ ಪಡೆದ ಬಳಿಕವೇ ಹಸ್ತಾಂತರಿಸಬೇಕು. ‘ಡಿ’ ದರ್ಜೆ ನೌಕರ ಶವ ಕೊಡುವಂತಿಲ್ಲ; ಬದಲಾಗಿ ವೈದ್ಯಕೀಯ ಅಧಿಕಾರಿ ಹಸ್ತಾಂತರ ಮಾಡಬೇಕು ಎಂಬ ನಿಯಮ ಜಾರಿಗೆ ನಿರ್ಧರಿಸಲಾಗಿದೆ ಎಂದರು.