LATEST NEWS
ಪಾತ್ರೆ ತೊಳೆಯುವ ವಿಚಾರಕ್ಕೆ ಗಲಾಟೆ -ಕೊಲೆಯಲ್ಲಿ ಅಂತ್ಯ

ಮಂಗಳೂರು, ಮಾರ್ಚ್ 8: ಪಾತ್ರೆ ತೊಳೆಯುವ ವಿಚಾರಕ್ಕೆ ನಡೆದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಮರವೂರು ಗ್ರಾಮದ ಇಂಡಿಯನ್ ಕೋಸ್ಟ್ ಗಾರ್ಡ್ ಸೈಟ್ ನಲ್ಲಿ ನಡದಿದೆ.
ಮೃತರನ್ನು ಉತ್ತರ ಪ್ರದೇಶ ರಾಜ್ಯದ ಸಂಜಯ್(28) ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶ ರಾಜ್ಯದ ಸೋಹಾನ್ ಯಾದವ್ (19) ಕೊಲೆ ಆರೋಪಿಯಾಗಿದ್ದಾನೆ. ಇವರಿಬ್ಬರು ಇಂಡಿಯನ್ ಕೋಸ್ಟ್ ಗಾರ್ಡ್ ಸೈಟ್ ನಲ್ಲಿ ಆವರಣ ಗೋಡೆ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕರು.

ಮಾರ್ಚ್ 5ರಂದು ಈ ಘಟನೆ ನಡೆದಿದ್ದು, ರಾತ್ರಿ ಸಂಜಯ್ ಮತ್ತು ಸೋಹಾನ್ ನಡುವೆ ಅಡುಗೆ ಮತ್ತು ತಟ್ಟೆ, ಪಾತ್ರೆ ತೊಳೆಯುವ ವಿಚಾರದಲ್ಲಿ ವಾಗ್ವಾದ ನಡೆದಿದೆ. ಈ ವೇಳೆ ಸಂಜಯ್ ನನ್ನು ಸೋಹನ್ ಯಾದವ್ ಬಲವಾಗಿ ಹಿಂದಕ್ಕೆ ತಳ್ಳಿದ್ದಾನೆ. ಇದರಿಂದ ಕೆಳಗೆ ಬಿದ್ದ ಸಂಜಯ್ ತಲೆಗೆ ಗಂಭೀರ ಗಾಯವಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮಾರ್ಚ್ 6ರಂದು ಮುಂಜಾನೆ ಅವರು ಕೊನೆಯುಸಿರೆಳೆದಿರುವುದಾಗಿ ಬಜ್ಪೆ ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಆರೋಪಿ ಸೋಹನ್ನನ್ನು ಬಜ್ಪೆ ಪೊಲೀಸರು ಮಂಗಳೂರು ರೈಲು ನಿಲ್ದಾಣದ ಬಳಿ ಮಂಗಳವಾರ ಮಧ್ಯಾಹ್ನ ಬಂಧಿಸಿದ್ದಾರೆ.