Connect with us

LATEST NEWS

ಉದ್ಯಮಿ ಎಂ.ಆರ್ ಕಾಮತ್ ನಿಗೂಢ ಸಾವಿನ ಕುರಿತು ವಿಶೇಷ ತನಿಖಾ ತಂಡದಿಂದ ತನಿಖೆಗೆ ಉದ್ಯಮಿ ಬಿ.ಆರ್‌.ಶೆಟ್ಟಿ ಒತ್ತಾಯ

ಮಂಗಳೂರು ಅಕ್ಟೋಬರ್ 09: ಮಂಗಳೂರಿನ ಪ್ರಮುಖ ಉದ್ಯಮಿ ಎಂ.ಆರ್ ಕಾಮತ್ ಅವರ ಅಸಹಜ ಸಾವಿನ ಕುರಿತಂತೆ ಕೂಲಂಕುಷವಾಗಿ ತನಿಖೆ ನಡೆಸಬೇಕೆಂದು ಉದ್ಯಮಿ ಬಿ.ಆರ್ ಶೆಟ್ಟಿ ಮಂಗಳೂರು ಪೊಲೀಸ್ ಕಮಿಷನರ್ ಅವರಿಗೆ ಪತ್ರ ಬರೆದಿದ್ದಾರೆ.


ಬಿ.ಆರ್‌.ಶೆಟ್ಟಿ ಅವರು ತಮ್ಮ ಕಾನೂನು ಸಲಹಾ ಸಂಸ್ಥೆ ಕಾಮತ್‌ ಜ್ಯೂರಿಸ್‌ ಮೂಲಕ ನಗರ ಪೊಲೀಸ್‌ ಕಮಿಷನರ್‌ ಅವರಿಗೆ ಪತ್ರ ಬರೆದಿದ್ದು, ಅದರಲ್ಲಿ ನಮ್ಮ ಕಕ್ಷಿದಾರರಾದ ಬಿ.ಆರ್‌.ಶೆಟ್ಟಿ ಅವರು ಯುಎಇಯ ದುಬೈನಲ್ಲಿ ಉದ್ಯಮಿಯಾಗಿದ್ದಾಗ ಎಂ.ಆರ್‌.ಕಾಮತ್‌ ಜೊತೆ ಸಂಸ್ಥೆಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡಿದ್ದು, ಅವರಿಬ್ಬರು ಉತ್ತಮ ಸ್ನೇಹಿತರಾಗಿದ್ದರು. ಕಷ್ಟಪಟ್ಟು ಗಳಿಸಿದ ಹಣವನ್ನು ವಿವಿಧ ಉದ್ದಿಮೆಗಳಲ್ಲಿ ತೊಡಗಿಸಿದ್ದ ಎಂ.ಆರ್‌.ಕಾಮತ್‌ ಅವರು ಕೋಟ್ಯಧಿಪತಿಯಾಗಿದ್ದರು. ಕೆಲ ವರ್ಷಗಳ ಹಿಂದೆ ಮಂಗಳೂರಿಗೆ ಮರಳಿ, ಇಲ್ಲೇ ನೆಲೆಸಿದ್ದರು. ಕೊಡುಗೈ ದಾನಿಯೂ ಆಗಿದ್ದ ಅವರು ಅನೇಕ ದೇವಸ್ಥಾನ ಹಾಗೂ ಮಠಗಳಿಗೆ ದೇಣಿಗೆ ನೀಡಿದ್ದರು. ಕಾಮತ್‌ ಅವರು ಸೆ. 17ರಂದು ಮೃತಪಟ್ಟಿರುವ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿ ಬಿ.ಆರ್‌.ಶೆಟ್ಟಿ ಅವರು ಆಘಾತಗೊಂಡಿದ್ದರು’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.


ಅಲ್ಲದೆ ಎಂ.ಆರ್‌. ಕಾಮತ್ ಅವರು ದೃಢ ಇಚ್ಛಾಶಕ್ತಿ ಹಾಗೂ ಶಿಸ್ತಿನ ಮನುಷ್ಯರಾಗಿದ್ದ ಅವರ ಸಾವಿನ ಬಗ್ಗೆ ಅನುಮಾನಗಳಿವೆ. ಸಾರ್ವಜನಿಕ ವಲಯದಲ್ಲೂ ಅವರ ಸಾವಿನ ಬಗ್ಗೆ ಅನೇಕ ವದಂತಿ ಹಬ್ಬಿವೆ. ಹಾಗಾಗಿ ಕೂಲಂಕಷ ತನಿಖೆ ನಡೆಸಿ ಸತ್ಯಾಂಶ ಏನೆಂಬುದನ್ನು ಹೊರಗೆಡವಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.


‘ಅವರು ಮೃತಪಟ್ಟು ಈಗಾಗಲೇ ಅನೇಕ ದಿನಗಳು ಕಳೆದಿದ್ದರೂ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ’ ಎಂದೂ ಪತ್ರದಲ್ಲಿ ದೂರಲಾಗಿದೆ. ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕು. ಈ ಪ್ರಕರಣದ ನಿಜಾಂಶವನ್ನು ಬಯಲಿಗೆಳೆಯಲು ವಿಶೇಷ ತನಿಖಾ ತಂಡ ರಚಿಸಬೇಕು’ ಎಂದು ಒತ್ತಾಯಿಸಿರುವ ಉದ್ಯಮಿ ಬಿ.ಆರ್‌.ಶೆಟ್ಟಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹಸಚಿವರು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಮತ್ತು ಮಹಾ ನಿರೀಕ್ಷಕರಿಗೂ ಅವರು ಪತ್ರದ ಪ್ರತಿಯನ್ನು ಕಳುಹಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *