FILM
ಮೋಹನ್ ಲಾಲ್ ನಟಿಸಿದ ‘ತುಡರುಮ್’ ಚಿತ್ರತಂಡದ ಮೇಲೆ ಕಥೆ ಕದ್ದ ಆರೋಪ

ಕೊಚ್ಚಿ, ಜೂನ್ 17: ಮಾಲಿವುಡ್ನಲ್ಲಿ ಇತ್ತೀಚೆಗಷ್ಟೇ ತೆರೆಕಂಡು ಸೂಪರ್ ಹಿಟ್ ಆಗಿರುವ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರ ‘ತುಡರುಮ್’ ಚಿತ್ರತಂಡದ ವಿರುದ್ಧ ಕಥೆ ಕದ್ದ ಆರೋಪ ಕೇಳಿ ಬಂದಿದೆ.
ಇದೇ ವರ್ಷದ ಏಪ್ರಿಲ್ನಲ್ಲಿ ಮೋಹನ್ ಲಾಲ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡ ‘ತುಡರುಮ್’ ಚಿತ್ರ ರಿಲೀಸ್ ಆಗಿತ್ತು. ತರುಣ್ ಮೂರ್ತಿ (Tharun Moorthy) ಆಯಕ್ಷನ್ ಕಟ್ ಹೇಳಿರುವ ಈ ಚಿತ್ರ ಬಾಕ್ಸಾಫೀಸ್ನಲ್ಲಿ ಭರ್ಜರಿ ಗಳಿಕೆ ಕಂಡಿದೆ. ಸಸ್ಪೆನ್ಸ್ ಥಿಲ್ಲರ್ ತುಡರುಮ್’ ವಿಶ್ವಾದ್ಯಂತ 200 ಕೋಟಿ ರೂಪಾಯಿಗೂ ಹೆಚ್ಚಿನ ಗಳಿಕೆ ಕಂಡಿದೆ. ಈ ಚಿತ್ರವನ್ನು ನೋಡಿ ಅನೇಕರು ‘ದೃಶ್ಯಂ’ ಸಿನಿಮಾವನ್ನು ನೆನಪು ಮಾಡಿಕೊಂಡಿದ್ದಾರೆ.

ಥಿಯೇಟರ್ನಲ್ಲಿ ಯಶಸ್ವಿ ಪ್ರದರ್ಶನ ಕಂಡ ನಂತ್ರ, ಇತ್ತೀಚೆಗೆ ಸಿನಿಮಾ ಒಟಿಟಿಗೆ ಕಾಲಿಟ್ಟಿದೆ. ಆದರೆ ಇದೀಗ ನಿರ್ದೇಶಕರೊಬ್ಬರು ‘ತುಡರುಮ್’ ಕಥೆಯನ್ನು ತನ್ನ ಸಿನಿಮಾದಿಂದ ಕದ್ದಿದ್ದಾರೆ ಎನ್ನುವ ಆರೋಪವನ್ನು ಮಾಡಿದ್ದಾರೆ. ‘ಸೆಕ್ಸಿ ದುರ್ಗಾ’ ಖ್ಯಾತಿಯ ನಿರ್ದೇಶಕ ಸನಲ್ ಕುಮಾರ್ ಶಶಿಧರನ್ ಅವರು ‘ತುಡರುಮ್’ ಕಥೆಯನ್ನು ತನ್ನ ‘ತೀಯಾಟ್ಟಂ’ ಚಿತ್ರದಿಂದ ಕದ್ದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಈ ಕುರಿತು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. “ನಾನು ತುಡರುಮ್ ಚಿತ್ರವನ್ನು ನೋಡಿದೆ. ಇದು 2020ರಲ್ಲಿ ಬರೆದಿದ್ದ ನನ್ನ ‘ತೀಯಾಟ್ಟಂ’ (Theeyattam) ಚಿತ್ರಕಥೆಯ ಆಸ್ತಿ ಪಂಜರವನ್ನೇ ಕದ್ದು ಮಾಡಿದಂತಿದೆ. ಸದ್ಯ ಕಥೆಯ ತಿರುಳು ಸುರಕ್ಷಿತವಾಗಿ ಉಳಿದಿದೆ” ಎಂದಿದ್ದಾರೆ. ಇನ್ನು ಕಥೆಯ ಬಗ್ಗೆ ಮಾತನಾಡಿರುವ ಅವರು, “ನನ್ನ ಕಥೆಯಲ್ಲಿ ಅಂಬಿ ಎಂಬ ಆಟೋರಿಕ್ಷಾ ಚಾಲಕನ ಬಗ್ಗೆಯಿದೆ. ಅವನ ವಾಹನದೊಳಗೆ ಯಾರೋ ಒಬ್ಬನನ್ನು ಕೊಲೆ ಮಾಡಿ, ಕತ್ತರಿಸಿದ ತಲೆಯನ್ನು ಅದರಲ್ಲೇ ಬಿಟ್ಟು ಹೋದ ನಂತರ ಪೊಲೀಸರು ಅವನನನ್ನು ಆರೋಪಿಯನ್ನಾಗಿ ಮಾಡುತ್ತಾರೆ. ‘ತುಡರುಮ್’ನಲ್ಲಿ ಅಂಬಾಸಿಡರ್ ಟ್ಯಾಕ್ಸಿಯನ್ನು ಓಡಿಸುವ ‘ಬೆಂಜ್’ ಎನ್ನುವ ಪಾತ್ರದಲ್ಲಿ ಮೋಹನ್ ಲಾಲ್ ಕಾಣಿಸಿಕೊಂಡಿದ್ದಾರೆ” ಎಂದಿದ್ದಾರೆ.
ಸನಲ್ ಪ್ರಕಾರ, ‘ತುಡರುಮ್’ ಚಿತ್ರತಂಡ ನನ್ನ ಚಿತ್ರದ ಅಂಶಗಳನ್ನು ಅವುಗಳ ಮಹತ್ವವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೆ ಕದ್ದಿದ್ದಾರೆ. ‘ತುಡರುಮ್’ ಚಿತ್ರವು ವಿಭಿನ್ನ ಚಿತ್ರ ಆಗಿದೆ. ಆದರೆ ಮೂಲವನ್ನು ಸಂಪೂರ್ಣವಾಗಿ ಮರೆಮಾಡಲು ವ್ಯತ್ಯಾಸಗಳು ಸಾಕಾಗುವುದಿಲ್ಲ. ಮೂಲವನ್ನು ಗುರುತಿಸುವುದನ್ನು ತಪ್ಪಿಸಲು ಉದ್ದೇಶಪೂರ್ವಕವಾಗಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
“ನನ್ನ ಕಥೆಯ ‘ಕೊನ್ನಾಳ್ ಪಾಪಂ ತಿನ್ನಾಳ್ ತೀರಮ್’ (‘ಕೊಲ್ಲುವ ಪಾಪ ತಿಂದರೆ ಪರಿಹಾರ’ ) ಎಂಬ ಗಾದೆಯ ಸಂಭಾಷಣೆಯನ್ನು ಈ ಚಿತ್ರದಲ್ಲಿ ಸಂಪೂರ್ಣವಾಗಿ ಅನಗತ್ಯವಾಗಿದ್ದರೂ ಬಳಸಲಾಗಿದೆ. ಯಾವುದೇ ಕುರುಹು ಬಿಡದೆ ಕದಿಯುವಲ್ಲಿ ನಿಪುಣರಾದ ಕಳ್ಳರು ಸಹ ಕೆಲವು ಹುಚ್ಚಾಟಿಕೆಗಳಿಂದಾಗಿ ತಮ್ಮನ್ನು ತಾವು ಮರೆತುಬಿಡಬಹುದು. ಈ ಸಂಭಾಷಣೆಯ ಬಳಕೆಯು ಅಂತಹ ಒಂದು ಲೋಪ ಎಂದು ನಾನು ಭಾವಿಸುವೆ” ಎಂದಿದ್ದಾರೆ.
‘ತೀಯಾಟ್ಟಂ’ ಚಿತ್ರದ ಕಥೆಯನ್ನು ಮಂಜು ವಾರಿಯರ್, ಟೋವಿನೋ ಥಾಮಸ್ ಮತ್ತು ಸುಧೀರ್ ಕರಮಣ ಅವರು ಕೇಳಿದ್ದಾರೆ. ಇದಕ್ಕೆ 5 ವರ್ಷ ಆಗಿದೆ. ಅದನ್ನವರು ಮರೆತಿರಬಹುದು. ನಾನು ಮರೆತಿಲ್ಲ. ಕೆಲ ಕಾರಣಗಳಿಂದಾಗಿ ಚಿತ್ರ ಅರ್ಧದಲ್ಲೇ ನಿಂತಿತ್ತು ಎಂದು ಅವರು ಹೇಳಿದ್ದಾರೆ. ನಾನು ಶೀಘ್ರದಲ್ಲೇ ನನ್ನ ಚಿತ್ರಕಥೆಯನ್ನು ಇಲ್ಲಿ (ಫೇಸ್ಬುಕ್)ನಲ್ಲಿ ಪ್ರಕಟಿಸುತ್ತೇನೆ ಎಂದು ಸನಲ್ ಹೇಳಿದ್ದಾರೆ. ಸದ್ಯ ಈ ಬಗ್ಗೆ ‘ತುಡರುಮ್’ ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಚಿತ್ರ ‘ಜಿಯೋ ಹಾಟ್ ಸ್ಟಾರ್’ ನಲ್ಲಿ ಸ್ಟ್ರೀಮ್ ಆಗುತ್ತಿದೆ.