DAKSHINA KANNADA
ನಿಜವಾದ ದೈವದ ಅಭಯ – ತಿಂಗಳೊಳಗೆ ಜೈಲಿನಿಂದ ಹೊರ ಬಂದ ಜನಾರ್ಧನ ರೆಡ್ಡಿ

ಪುತ್ತೂರು ಜೂನ್ 17: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ದೈವಗಳ ಪವಾಡವನ್ನು ಯಾರು ಅಲ್ಲಗಳಿಯುವುದಿಲ್ಲ. ಜನ ಇಟ್ಟ ನಂಬಿಕೆ ಮತ್ತು ಶ್ರದ್ಧೆಗೆ ತಕ್ಕ ಪ್ರತಿಫಲ ದೈವಗಳಿಂದ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಹಲವಾರು ಸಾಕ್ಷಿಗಳಿವೆ. ಅದರಂತೆ ಈ ಬಾರಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರಿಗೆ ದೈವ ಅಭಯ ನೀಡಿದಂತೆಯೇ ನಡೆದಿದ್ದು, ಈ ಕುರಿತಂತೆ ಸ್ವತಃ ಜನಾರ್ಧನ ರೆಡ್ಡಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ತುಳುನಾಡಿನಲ್ಲಿ ದೈವಾರಾಧನೆಗೆ ಅತ್ಯಂತ ಪ್ರಮುಖ ಸ್ಥಾನವಿದೆ. ಆ ಕಾರಣಕ್ಕೇ ತುಳುವರು ದೈವಾರಾಧನೆಯನ್ನು ಆರಾಧಿಸಿಕೊಂಡು ಬರುತ್ತಿದ್ದಾರೆ. ದೇಶ- ವಿದೇಶಗಳಲ್ಲೂ ದೈವಗಳ ಆರಾಧಕರಿದ್ದು, ಇದೀಗ ಈ ದೈವದ ಮಹಿಮೆಗೆ ಮಾಜಿ ಸಚಿವ, ಶಾಸಕ ಗಾಲಿ ಜನಾರ್ಧನ ರೆಡ್ಡಿ ಪಾತ್ರರಾಗಿದ್ದಾರೆ. ಸ್ವತಹ ಜಮಾರ್ಧನ ರೆಡ್ಡಿ ಈ ವಿಚಾರವನ್ನು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರಿನ ಅರೆಲ್ತಾಡಿ ಇರ್ವರು ಉಳ್ಳಾಕ್ಲು ಮತ್ತು ಕೆಡಿಂಜೊಡಿತ್ತಾಯ ಪರಿಹಾರ ದೈವಗಳ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಆರಂಭವಾಗಿ, ಕಳೆದ ಮೇ 13 ರಂದು ಬ್ರಹ್ಮಕಲಶೋತ್ಸವವೂ ನಡೆದಿದೆ. ಈ ಬ್ರಹ್ಮಕಲಶೋತ್ಸವಕ್ಕೆ ಜನಾರ್ಧನ ರೆಡ್ಡಿ ಭಾಗವಹಿಸುವ ಭರವಸೆಯನ್ನು ನೀಡಿದ್ದರು. ಸವಣೂರಿನ ಕೆಡಿಂಜೆಯ ಯುವಕನೋರ್ವನ ಮೂಲಕ ಜನಾರ್ಧನ ರೆಡ್ಡಿ ಈ ಕ್ಷೇತ್ರದ ಬಗ್ಗೆ ಮಾಹಿತಿ ಪಡೆದಿದ್ದರು.

ಈ ಹಿನ್ನಲೆಯಲ್ಲಿ ರೆಡ್ಡಿಯವರು ಕ್ಷೇತ್ರಕ್ಕೆ ಭೇಟಿ ನೀಡುವ ಆಶ್ವಾಸನೆಯನ್ನೂ ಕೊಟ್ಟಿದ್ದರು. ಆದರೆ ಈ ನಡುವೆಯೇ ರೆಡ್ಡಿಯವರು ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದರು. ಮೇ 15 ರಂದು ಕ್ಷೇತ್ರದಲ್ಲಿ ಕೆಡೆಂಜೊಡಿತ್ತಾಯ ದೈವದ ನೇಮೋತ್ಸವ ನಡೆದಿತ್ತು. ಆ ಸಂದರ್ಭದಲ್ಲಿ ದೈವದ ಮುಂದೆ ಗ್ರಾಮಸ್ಥರು ಜನಾರ್ಧನ ರೆಡ್ಡಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಜನಾರ್ಧನ ರೆಡ್ಡಿ ಕ್ಷೇತ್ರಕ್ಕೆ ಆಗಮಿಸುವ ಎಲ್ಲಾ ಸಿದ್ಧತೆಗಳು ನಡೆದಿತ್ತು. ಕ್ಷೇತ್ರಕ್ಕೆ ಬೇಕಾದ ಧನ ಸಹಾಯವನ್ನೂ ನೀಡುವ ಭರವಸೆಯನ್ನೂ ನೀಡಿದ್ದರು. ಈ ವಿಚಾರವನ್ನು ಗ್ರಾಮಸ್ಥರು ದೈವದ ಮುಂದೆ ಹೇಳಿದ್ದರು. ಗ್ರಾಮಸ್ಥರ ವಿಚಾರವನ್ನು ಕೇಳಿದ ದೈವ ಒಂದು ತಿಂಗಳ ಒಳಗೆ ರೆಡ್ಡಿಯವರ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ದೈವ ಅಭಯ ನೀಡಿತ್ತು.
ದೈವ ಅಭಯ ನೀಡಿದ ಒಂದು ತಿಂಗಳೊಳಗಾಗಿ ಜನಾರ್ಧನ ರೆಡ್ಡಿಯವರಿಗೆ ಜಾಮೀನು ಸಿಕ್ಕಿ, ಜೈಲಿನಿಂದ ಹೊರ ಬಂದಿದ್ದರು. ಈ ವಿಚಾರವನ್ನು ರೆಡ್ಡಿ ತನ್ನ ಎಕ್ಸ್ ಖಾತೆಯಲ್ಲಿ ಹಂಚಿದ್ದು, ದೈವದ ಮಹಿಮೆಯನ್ನು ಕೊಂಡಾಡಿದ್ದಾರೆ.