LATEST NEWS
ಮದುವೆಯಾಗುತ್ತೇನೆ ಎಂದು ನಂಬಿಸಿ ವಂಚನೆ ಮಾಜಿ ಪುರಸಭಾ ಸದಸ್ಯನ ಬಂಧನ

ಉಡುಪಿ ಸೆಪ್ಟೆಂಬರ್ 4: ಪರಿಶಿಷ್ಟ ಪಂಗಡಕ್ಕೆ ಸೇರಿದ್ದ ಮಹಿಳೆಯೊಬ್ಬರಿಗೆ ಸರ್ಕಾರಿ ಕೆಲಸ ಕೊಡಿಸಿ, ಮದುವೆಯಾಗುತ್ತೇನೆಂದು ನಂಬಿಸಿ ಹಣ ಪಡೆದ ವಂಚನೆ ಮಾಡಿದ ಆರೋಪದ ಮೇಲೆ ಕಾಂಗ್ರೆಸ್ ಬೆಂಬಲಿತ ಕುಂದಾಪುರದ ಮಾಜಿ ಪುರಸಭಾ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕುಂದಾಪುರದ ಮಾಜಿ ಪುರಸಭಾ ಸದಸ್ಯ ಸಂದೀಪ ಪೂಜಾರಿ ಕೋಡಿ (34) ಎಂದು ಗುರುತಿಸಲಾಗಿದೆ. ಈತ ಪರಿಶಿಷ್ಟ ಪಂಗಡಕ್ಕೆ ಸೇರಿರುವ ಮಹಿಳೆಯೋರ್ವರ ಪತಿ ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಮೃತಪಟ್ಟಿದ್ದು ಅವರ ಉದ್ಯೋಗವನ್ನು ಅವರ ಪತ್ನಿಗೆ ಕೊಡಿಸುವುದಾಗಿ ಹಾಗೂ ಮದುವೆಯಾಗುತ್ತೇನೆಂದು ಭರವಸೆ ಕೊಟ್ಟು ಆ ಮಹಿಳೆಯಿಂದ ಹಣವನ್ನು ಪಡೆದಿದ್ದನು. ನಂತರ ಸಂದೀಪ ಪೂಜಾರಿ ಆಕೆಗೆ ಬೈದು ಜಾತಿ ನಿಂದನೆ ಮಾಡಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಆ ಮಹಿಳೆ ತನ್ನ ಗೆಳತಿಯಲ್ಲಿ ಮೂಲಕ ಆಪಾದಿತನಲ್ಲಿ ವಿಚಾರಿಸಿದಾಗ ಅವರಿಗೂ ಸಹ ಅವಾಚ್ಯವಾಗಿ ಅವಹೇಳನ ಮಾಡಿದ್ದಾನೆ ಎನ್ನಲಾಗಿದೆ. ಸೆ.1ರಂದು ಸಂದೀಪ ಪೂಜಾರಿ ಮೊಬೈಲ್ ನಂಬ್ರದಿಂದ ಆತನ ಪತ್ನಿಯೂ ಕೂಡ ವಂಚನೆಗೊಳಗಾದ ಮಹಿಳೆಗೆ ಕರೆ ಮಾಡಿ ನನ್ನ ಗಂಡನ ಬಗ್ಗೆ ಮಾತನಾಡದೆ ಸುಮ್ಮನಿರಬೇಕು ಎಂದು ಅವಾಚ್ಯವಾಗಿ ಬೈದು ಬೆದರಿಕೆ ಹಾಕಿದ್ದಳು. ಈ ಬಗ್ಗೆ ಆ ಮಹಿಳೆ ಸಂದೀಪ ಪೂಜಾರಿ ತನಗೆ ಕೆಲಸ ಕೊಡಿಸುತ್ತೇನೆಂದು ನಂಬಿಸಿ ಹಣವನ್ನೆಲ್ಲಾ ಮೋಸದಿಂದ ಪಡೆದುಕೊಂಡಿದ್ದು ವಿವಾಹವಾಗುತ್ತೇನೆ ಎಂದು ಸುಳ್ಳು ಹೇಳಿ ವಂಚಿಸಿರುವುದಾಗಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.