DAKSHINA KANNADA
ಮಂಗಳೂರು:ಮತ್ತೊಂದು ಅಚ್ಚರಿಗೆ ಸಾಕ್ಷಿಯಾದ ಪುಣ್ಯ ಭೂಮಿ, ಪಿಲಿಚಾಮುಂಡಿ ದೈವಸ್ಥಾನದಲ್ಲಿ ಹುಲಿ ಹೆಜ್ಜೆ..!

ಮಂಗಳೂರು : ದೈವ – ದೇವರ ನೆಲೆವೀಡಾದ ಈ ಪುಣ್ಯ ಭೂಮಿ ತುಳುನಾಡು ಹಲವು ಪವಾಡಗಳಿಗೆ ಸಾಕ್ಷಿಯಾಗಿದೆ. ಇಲ್ಲಿನ ಜನರ ರಕ್ಷಣೆಗೆ ಇರುವುದು ತಲತಲಾಂತರಗಳಿಂದ ನಂಬಿಕೊಂಡು ಬಂದ ಭೂತ ದೈವಗಳು.
ಇದೇ ಪುಣ್ಯ ಭೂಮಿ ಇದೀಗ ಮತ್ತೊಂದು ಅಚ್ಚರಿಗೆ ಸಾಕ್ಷಿಯಾಗಿದೆ. ಮಂಗಳೂರಿನ ಪೆರ್ಮುದೆಯಲ್ಲಿ ಎರಡು ತಿಂಗಳ ಹಿಂದೆ ಮುಸ್ಲಿಂ ಯುವಕನ ಮೇಲೆ ಬಂದು ಆವೇಶ ತೋರಿದ್ದ ದೈವ ಎರಡೇ ತಿಂಗಳಲ್ಲಿ ಮತ್ತೊಂದು ಪವಾಡ ತೋರುವ ಮೂಲಕ ಅಚ್ಚರಿ ಸೃಷ್ಟಿಸಿದೆ. ದೈವದ ಮುನಿಸಿನ ಬೆನ್ನಲ್ಲೇ ಮಂಗಳೂರಿನ ಪೆರ್ಮುದೆಯಲ್ಲಿ ನೇಮೋತ್ಸವಕ್ಕೆ ತಯಾರಿ ನಡೆದಿದ್ದು, 18 ವರ್ಷಗಳ ಬಳಿಕ ಪೆರ್ಮುದೆಯ ಕಾಯರ್ ಕಟ್ಟೆಯಲ್ಲಿ ದೈವದ ನೇಮೋತ್ಸವ ನಡೆಯಲಿದೆ. ಪಾಳು ಬಿದ್ದಿದ್ದ ಪಿಲಿಚಾಮುಂಡಿ ದೈವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯ ಅಂತಿಮ ಹಂತಕ್ಕೆ ಬಂದಿದ್ದು, ಎರಡೇ ತಿಂಗಳಲ್ಲಿ ದೈವಸ್ಥಾನಕ್ಕೆ ದ್ವಾರ, ಮೆಟ್ಟಿಲು ನಿರ್ಮಾಣವಾಗಿದೆ. ಜ.4 ರಂದು 18 ವರ್ಷಗಳ ಬಳಿಕ ಪಿಲಿಚಾಮುಂಡಿ ನೇಮೋತ್ಸವ ನಡೆಯಲಿದೆ. ಎರಡು ತಿಂಗಳ ಹಿಂದೆ ಮುಸ್ಲಿಂ ಯುವಕನ ಮೂಲಕ ಪಿಲಿಚಾಮುಂಡಿ ದೈವ ಮುನಿಸು ತೋರಿಸಿತ್ತು. 18 ವರ್ಷಗಳಿಂದ ದೈವಾರಾಧನೆ ನಿಲ್ಲಿಸಿದ್ದಕ್ಕೆ ಗಂಡಾಂತರದ ಎಚ್ಚರಿಕೆ ನೀಡಿತ್ತು. ಕೊನೆಗೂ ದೈವದ ಎಚ್ಚರಿಕೆ ಬೆನ್ನಲ್ಲೇ ಪ್ರಶ್ನಾ ಚಿಂತನೆ ನಡೆಸಿ ಕಾಯರ್ ಕಟ್ಟೆಯ ಪಾಳುಬಿದ್ದ ದೈವಸ್ಥಾನದ ಪುನರ್ ಅಭಿವೃದ್ಧಿ ಮಾಡಲಾಗಿದೆ. ಜ.4ರಂದು ಅದ್ದೂರಿಯಾಗಿ ಪಿಲಿಚಾಮುಂಡಿ ನೇಮೋತ್ಸವ ನಡೆಯಲಿದೆ. ದೈವಾರಾಧನೆ ನಿಲ್ಲಿಸಿದ್ದ ಗ್ರಾಮಸ್ಥರನ್ನ ಎಚ್ಚರಿಸಲು ಮುಸ್ಲಿಂ ಯುವಕನ ಮೇಲೆ ದೈವ ಆವಾಹನೆ ಆಗಿತ್ತು. ಒರಿಸ್ಸಾ ಮೂಲದ ಕಾರ್ಮಿಕ ಮುಸ್ಲಿಂ ಯುವಕ ಜೋರ್ ಆಲಿ ಮೇಲೆ ದೈವದ ಆವೇಷವಾಗಿತ್ತು. ಇನ್ನು ದೈವ ಎಚ್ಚರಿಕೆಗೆ ಮಣಿದು 18 ವರ್ಷಗಳ ಬಳಿಕ ಪಿಲಿಚಾಮುಂಡಿ ದೈವದ ನೇಮೋತ್ಸವಕ್ಕೆ ಎಂಆರ್ಪಿಎಲ್ ಅನುಮತಿ ನೀಡಿದೆ. ಬೃಹತ್ ಕೈಗಾರಿಕೆ ಕಾರಣಕ್ಕೆ 18 ವರ್ಷಗಳಿಂದ ಇಲ್ಲಿ ಪಿಲಿಚಾಮುಂಡಿ ದೈವದ ನೇಮೋತ್ಸವ ಸ್ಥಗಿತವಾಗಿತ್ತು. ಪೆರ್ಮುದೆ ಬಳಿಯ ಎಂಆರ್ಪಿಎಲ್ ತೈಲ ಶುದ್ದೀಕರಣ ಘಟಕದ ಕಾರಣದಿಂದ ನೇಮೋತ್ಸವ ಸ್ಥಗಿತವಾಗಿತ್ತು. ಮುಸ್ಲಿಂ ಯುವಕನ ಮೇಲೆ ದೈವದ ಆವೇಶದ ಬಳಿಕ ಕಂಪೆನಿಗೂ ಗಂಡಾಂತರದ ಸೂಚನೆ ಇದ್ದು, ನೇಮೋತ್ಸವ ನಡೆಯದೇ ಇದ್ದರೆ ಇಡೀ ಗ್ರಾಮ ಮತ್ತು ಕಂಪೆನಿಗೆ ಗಂಡಾಂತರದ ಸೂಚನೆ ಪ್ರಶ್ನಾ ಚಿಂತನೆ ವೇಳೆಯೂ ಸಿಕ್ಕಿತ್ತು. ಇದಾದ ಬೆನ್ನಲ್ಲೇ ಪಿಲಿಚಾಮುಂಡಿ ದೈವದ ಪವಾಡ ಕಂಡು ಕಂಪೆನಿ ಅಧಿಕಾರಿಗಳಿಗೂ ದಿಗ್ಭ್ರಮೆ ಮೂಡಿದೆ. ಇದೀಗ ಕೊನೆಗೂ ದೈವದ ಮುನಿಸಿಗೆ ಮಣಿದ ಎಂಆರ್ಪಿಎಲ್ , ಕಾಯರ್ ಕಟ್ಟೆಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲು ಗ್ರೀನ್ ಸಿಗ್ನಲ್ ನೀಡಿದೆ. ಎಂಆರ್ಪಿಎಲ್ ಚಿಮಿಣಿ ದೀಪದ ಅಡಿಯಲ್ಲೇ ದೈವಾರಾಧನೆ ನಡೆಯಲಿದೆ.

ಇನ್ನು ದೈವಸ್ಥಾನದ ಅಭಿವೃದ್ದಿ ಕಾಮಗಾರಿ ಹೊತ್ತಲ್ಲಿ ಪವಾಡ ಕಂಡು ದೈವಾರಧಕರಲ್ಲಿ ಅಚ್ಚರಿ ಮೂಡಿದೆ. ಹುಲಿ ಹೆಜ್ಜೆ ಗುರುತಿನ ಮೂಲಕ ಕಾಯರ್ ಕಟ್ಟೆಯಲ್ಲಿ ದೈವ ಪವಾಡ ಮತ್ತೆ ಸಾಬೀತಾಗಿದೆ. ದೈವಸ್ಥಾನದ ಅಭಿವೃದ್ಧಿ ಕಾಮಗಾರಿ ವೇಳೆ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿದ್ದು, ಪಿಲಿಚಾಮುಂಡಿ ದೈವದ ಜೊತೆಗೆ ನಂಟು ಹೊಂದಿರೋ ವ್ಯಾಘ್ರನ ಹುಲಿ ಹೆಜ್ಜೆ ಇದಾಗಿದೆ ಎಂದು ಜನ ಬಲವಾಗಿ ನಂಬಿದ್ದಾರೆ. ದೈವಸ್ಥಾನದ ಮೇಲೆ ಹಾಗೂ ಮಣ್ಣಿನಲ್ಲಿ ಹುಲಿ ಹೆಜ್ಜೆ ಗುರುತು ಇದ್ದು, ಕೆಲಸ ಮಾಡುತಿದ್ದ ಸ್ಥಳೀಯ ಯುವಕರಿಗೆ ಹುಲಿ ಹೆಜ್ಜೆ ಗುರುತು ಕಂಡಿದೆ. ಸಾರ್ವಜನಿಕವಾಗಿ ಕಾಣ ಸಿಗದೇ ಇದ್ದರೂ ದೈವಸ್ಥಾನದ ಜಾಗದಲ್ಲಿ ಹುಲಿ ಹೆಜ್ಜೆ ಗುರುತುಗಳು ಪತ್ತೆಯಾಗಿದೆ. ತುಳುವರು ಬಹಳ ನಂಬುಗೆಯಿಂದ ಪಿಲ್ಚಂಡಿ ಅಥವಾ ಪಿಲಿಚಾಮುಂಡಿ ಅಂತ ಕರೆಯುತ್ತಾರೆ. ಕನ್ನಡದಲ್ಲಿ ವ್ಯಾಘ್ರ ಚಾಮುಂಡಿ ಅಂತಲೂ ಕರೆಯೋ ದೈವ ಇದಾಗಿದೆ. ತುಳುನಾಡಿನ ಲಕ್ಷಾಂತರ ಜನರ ಸಾವಿರ ವರ್ಷಗಳ ನಂಬಿಕೆಯ ಪ್ರತೀಕವಾಗಿದ್ದು, ಈಶ್ವರ ದೇವರ ಅಪ್ಪಣೆ ಪ್ರಕಾರ ತುಳುನಾಡಿನ ಜನರನ್ನ ರಕ್ಷಿಸಲು ಭೂಮಿಗಿಳಿದು ಬಂದ ದೈವಶಕ್ತಿ ಅನ್ನೋ ನಂಬಿಕೆ ಇದೆ. ಇದೀಗ ಕಾಯರ್ ಕಟ್ಟೆಯಲ್ಲಿ ಹುಲಿ ಹೆಜ್ಜೆ ಗುರುತು ಕಂಡು ಭಕ್ತರು ಪುಳಕಿತರಾಗಿದ್ದು, ಜ. 4ರಂದು ಅದ್ದೂರಿಯಾಗಿ ನಡೆಯಲಿದೆ ನೇಮೋತ್ಸವ. ಗ್ರಾಮಸ್ಥರು ಮತ್ತು ಎಂಆರ್ಪಿಎಲ್ ಸಹಕಾರದಲ್ಲಿ ನೇಮೋತ್ಸವ ನಡೆಯಲಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನ ಪಾಲಿಸಿ ನೇಮೋತ್ಸವ ನಡೆಸಲು ಸಿದ್ದತೆ ನಡೆದಿದೆ.