DAKSHINA KANNADA
ಮಂಗಳೂರು: ಪಾರ್ಕಿಂಗ್ ವಿಚಾರದಲ್ಲಿ ಆಟೋ ಚಾಲಕನಿಗೆ ಥಳಿತ-ಆಸ್ಪತ್ರೆಗೆ ದಾಖಲು
ಮಂಗಳೂರು, ಮಾರ್ಚ್ 20: ಪಾರ್ಕಿಂಗ್ಗೆ ನಿಲ್ಲಿಸಿದ್ದ ಆಟೋ ಚಾಲಕನೊಬ್ಬನಿಗೆ ಉಳಿದ ಆಟೋ ಚಾಲಕರು ಥಳಿಸಿ ಗಾಯಗೊಳಿಸಿದ ಘಟನೆ ಪಣಂಬೂರು ಬೀಚ್ನಲ್ಲಿ ನಡೆದಿದೆ.ಗಾಯಗೊಂಡ ಚಾಲಕನನ್ನು ಹೇಮಚಂದ್ರ ಎಂದು ಗುರುತಿಸಲಾಗಿದೆ.
ನಿನ್ನೆ ಸಂಜೆ ವೇಳೆ ಪ್ರಯಾಣಿಕರೊಬ್ಬರ ಬಾಡಿಗೆ ನಿಮಿತ್ತ ಹೇಮಚಂದ್ರ ಅವರು ಪಣಂಬೂರು ಪಾರ್ಕ್ಗೆ ಹೋಗಿದ್ದರು. ಈ ವೇಳೆ ಸ್ಥಳಕ್ಕೆ ಬಂದ 10 ಮಂದಿಯ ಆಟೋ ಚಾಲಕರ ತಂಡ “ನೀನು ಇಲ್ಲಿಗೆ ಬಾಡಿಗೆ ಮಾಡಬಾರದು. ಇದು ನಮ್ಮ ಏರಿಯಾ, ಇಲ್ಲಿ ನಾವು ಮಾತ್ರ ಬಾಡಿಗೆ ಮಾಡುವುದು” ಎಂದು ಬೆದರಿಸಿದ್ದಾರೆ.
ಬಳಿಕ ಕಣ್ಣು, ಕೈಕಾಲು ಸಹಿತ ಮರ್ಮಾಂಗಕ್ಕೆ ಥಳಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರೊಬ್ಬರು ಪೆಟ್ಟು ತಿಂದ ಆಟೋ ಚಾಲಕನಿಗೇ ಬೈದು ಕಳುಹಿಸಿದ್ದಾರೆ ಎಂದು ಅವರು ದೂರಿದ್ದಾರೆ. ಗಂಭೀರ ಗಾಯಗೊಂಡಿರುವ ಆಟೋ ಚಾಲಕ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಘಟನೆ ಬಗ್ಗೆ ಆಟೋ ಚಾಲಕ ಪಣಂಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
“ಪಣಂಬೂರು ಪೊಲೀಸರಿಗೆ ವಿಷಯವೇ ಗೊತ್ತಿಲ್ಲವಂತೆ”
ಘಟನೆ ಬಗ್ಗೆ ಪಣಂಬೂರು ಪೊಲೀಸರ ಬಳಿ ಮಾಹಿತಿ ಕೇಳಿದಾಗ ಈ ಘಟನೆ ಬಗ್ಗೆ ನಮ್ಮ ಬಳಿ ಯಾವುದೇ ಮಾಹಿತಿಯಿಲ್ಲ ಎಂದು ತಿಳಿಸಿದ್ದಾರೆ. ಆದರೆ ಘಟನೆ ಬಗ್ಗೆ ಗಾಯಗೊಂಡ ಆಟೋ ಚಾಲಕ ಠಾಣೆಗೆ ಲಿಖಿತ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
You must be logged in to post a comment Login