DAKSHINA KANNADA
ರಾಜ್ಯದ ನಂಬರ್ 1 ಸಂಸದ ನಳಿನ್ ಕಮಾರ್ ಅವರ ಆದರ್ಶ ಗ್ರಾಮದಲ್ಲೇ ಮೂಲಭೂತ ಸೌಕರ್ಯಗಳ ಕೊರತೆ

ರಾಜ್ಯದ ನಂಬರ್ 1 ಸಂಸದ ನಳಿನ್ ಕಮಾರ್ ಅವರ ಆದರ್ಶ ಗ್ರಾಮದಲ್ಲೇ ಮೂಲಭೂತ ಸೌಕರ್ಯಗಳ ಕೊರತೆ
ಸುಳ್ಯ ಸೆಪ್ಟೆಂಬರ್ 24: ರಾಜ್ಯದ ನಂಬರ್ 1 ಸಂಸದ ಎಂದು ಹೆಸರು ಮಾಡಿರುವ ನೂತನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಆದರ್ಶ ಗ್ರಾಮ ಯೋಜನೆಯಡಿ ದತ್ತು ತೆಗೆದುಕೊಂಡಿರುವ ಬಳ್ಪ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲದೆ ರೋಗಿಯೊಬ್ಬರನ್ನು ಹೊತ್ತು ಸ್ಥಳೀಯರು ಆಸ್ಪತ್ರೆಗೆ ಸೇರಿಸುವಂತಾಗಿದೆ.
ಬಳ್ಪ ಪೇಟೆಯಿಂದ ಸುಮಾರು ಮೂರು ಕಿಲೋ ಮೀಟರ್ ದೂರದಲ್ಲಿರುವ ಪಡಿಕಲ್ಲಾಯ ಎಂಬಲ್ಲಿ ರಸ್ತೆ ಕೆಟ್ಟು ಹೋದ ಕಾರಣ ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾದ ಪಡಿಕ್ಕಲಾಯ ರಾಮಣ್ಣ ಪೂಜಾರಿ (72) ಎಂಬವರನ್ನು ಸ್ಥಳೀಯರು ಹೊತ್ತು ಆಸ್ಪತ್ರೆಗೆ ಸೇರಿಸುವಂತಾಗಿದೆ.

ಪಡಿಕಲ್ಲಾಯ, ಪಾಂಡಿ ಎನ್ನುವ ಅಲ್ಲಿನ ಪ್ರದೇಶಕ್ಕೆ ರಸ್ತೆ ಇದ್ದರೂ ವಾಹನ ಹೋಗದ ಸ್ಥಿತಿಯಿದೆ. ಹೀಗಾಗಿ ಅಂಬುಲೆನ್ಸ್ ತೆರಳದ ಕಾರಣ 72ರ ವೃದ್ಧ ರಾಮಣ್ಣ ಪೂಜಾರಿಯನ್ನು ಸ್ಥಳೀಯರು ಹೊತ್ತುಕೊಂಡೇ ತೆರಳಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಯಂತೆ ದೇಶಾದ್ಯಂತ ಸಂಸದರು ಒಂದು ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಬೇಕಿದೆ. ಅದರಂತೆ, ನಳಿನ್ ಕುಮಾರ್ 2016 ರಲ್ಲಿ ಬಳ್ಪ ಗ್ರಾಮವನ್ನು ದತ್ತು ಪಡೆದಿದ್ದರು.
ಕಳೆದ ಬಾರಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಳ್ಪ ಗ್ರಾಮ ಸಂಪೂರ್ಣ ಅಭಿವೃದ್ಧಿಯಾಗಿದೆ ಎಂದು ಹೇಳಿ ಕೊಳ್ಳುತ್ತಿದ್ದರು. ಆದರೆ ಇದೀಗ ಆದರ್ಶ ಗ್ರಾಮದ ವಾಸ್ತವ ಸ್ಥಿತಿ ಬೆಳಕಿಗೆ ಬಂದಿದ್ದು. ಸಾಮಾಜಿಕ ಜಾಲತಾಣದಲ್ಲಿ ನಳಿನ್ ಕುಮಾರ್ ವಿರುದ್ಧ ವಾಗ್ದಾಳಿ ಆರಂಭಿಸಿದ್ದಾರೆ.