LATEST NEWS
ಮಂಗಳೂರಿನಲ್ಲಿ ನಡೆಯುವ ಸಿಎಎ, ಎನ್.ಆರ್.ಸಿ ಪ್ರತಿಭಟನೆ, ಸಂಶಯ ಮೂಡಿಸಿದ ಮಂಗಳೂರು ಬಿಷಪ್ ನಡೆ

ಮಂಗಳೂರಿನಲ್ಲಿ ನಡೆಯುವ ಸಿಎಎ, ಎನ್.ಆರ್.ಸಿ ಪ್ರತಿಭಟನೆ, ಸಂಶಯ ಮೂಡಿಸಿದ ಮಂಗಳೂರು ಬಿಷಪ್ ನಡೆ
ಮಂಗಳೂರು, ಜನವರಿ 15: ಮಂಗಳೂರಿನ ಅಡ್ಯಾರ್ ನಲ್ಲಿ ಇಂದು ಮುಸ್ಲಿಂ ಸೆಂಟ್ರಲ್ ಕಮಿಟಿ ನೇತೃತ್ವದಲ್ಲಿ 33 ಸಂಘಟನೆಗಳು ಸಿಎಎ, ಎನ್.ಆರ್.ಸಿ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದೆ. ಹಲವು ಮುಸ್ಲಿಂ ಸಂಘಟನೆಗಳು, ದಲಿತ ಸಂಘಟನೆಗಳು ಸೇರಿದಂತೆ ಬಹಿರಂಗವಾಗಿ ಈ ಪ್ರತಿಭಟನೆಗೆ ತಮ್ಮ ಬೆಂಬಲ ಸೂಚಿಸಿದೆ. ಆದರೆ ಕ್ರೈಸ್ತ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಮಂಗಳೂರು ಕಥೋಲಿಕ್ ಧರ್ಮ ಪ್ರಾಂತ್ರ್ಯದ ಬಿಷಪ್ ಮಾತ್ರ ಈವರೆಗೂ ಪ್ರತಿಭಟನೆಗೆ ತಮ್ಮ ಬೆಂಬಲವನ್ನು ಬಹಿರಂಗವಾಗಿ ಸೂಚಿಸಿಲ್ಲ. ಆದರೆ ಬಿಷಪ್ ರ ಭಾವಚಿತ್ರವಿರುವ ಕೆಲವು ಪೋಸ್ಟರ್ ಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಬಿಷಪ್ ಅವರು ಪ್ರತಿಭಟನೆಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಬಿಂಬಿಸಲಾಗಿದೆ.
ರಾಜಕೀಯವಾಗಿ ಗುರುತಿಸಿಕೊಂಡಿರುವ ಐವನ್ ಡಿಸೋಜಾ, ಎ.ಸಿ. ವಿನಯರಾಜ್, ಜೆ.ಆರ್.ಲೋಬೋ ಮೊದಲಾದವರು ಬಹಿರಂಗವಾಗಿ ಪ್ರತಿಭಟನೆಗೆ ಬೆಂಬಲ ಸೂಚಿಸಿರುವುದನ್ನು ಹೊರತುಪಡಿಸಿ ಬಿಷಪ್ ಎಲ್ಲಿಯೂ ಪ್ರತಿಭಟನೆಗೆ ಬೆಂಬಲ ಸೂಚಿಸುವ ಹೇಳಿಕೆಯನ್ನು ಅಧಿಕೃತವಾಗಿ ನೀಡಿಲ್ಲ.

ಬೆಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಈಗಾಗಲೇ ಸಿಎಎ, ಎನ್.ಆರ್.ಸಿ ಕಾನೂನಿಗೆ ವಿರುದ್ಧವಾಗಿ ಧ್ವನಿ ಎತ್ತಿದ್ದರೂ, ಮಂಗಳೂರು ಬಿಷಪ್ ಮಾತ್ರ ಈ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರವನ್ನು ಈವರೆಗೂ ಪ್ರಕಟಿಸದಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.
ಮಂಗಳೂರು ಕ್ರೈಸ್ತರು ಕೇಂದ್ರದ ಈ ಕಾನೂನಿನ ಪರವಾಗಿದ್ದಾರೆ ಎನ್ನುವ ಕೆಲವು ಹೇಳಿಕೆಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಸಮುದಾಯದ ಮುಖ್ಯಸ್ಥ ಎನಿಸಿಕೊಂಡಿರುವ ಬಿಷಪ್ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡದಿರುವುದು ಬಿಷಪ್ ಕೇಂದ್ರ ಸರಕಾರದ ಪರವಾಗಿದ್ದಾರೆಯೋ ಎನ್ನುವ ಸೂಚನೆಯನ್ನೂ ನೀಡುತ್ತಿದೆ.