BELTHANGADI
ಬೆಳ್ತಂಗಡಿ – ಹನಿಮೂನ್ ಗೆ ಬಂದ ಗಂಡ ವರದಕ್ಷಿಣೆ ಕೇಸ್ ನಲ್ಲಿ ಅರೆಸ್ಟ್

ಬೆಳ್ತಂಗಡಿ ಜುಲೈ 25: ಹನಿಮೂನ್ ಗೆಂದು ಹೆಂಡತಿಯನ್ನು ಕರೆದುಕೊಂಡು ಬಂದಿದ್ದ ಗಂಡ ರಾತ್ರಿ ವೇಳೆ ಆಕೆಗೆ ವರದಕ್ಷಿಣಿ ನೀಡುವಂತೆ ಕಿರುಕುಳ ನೀಡಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದ್ದು, ಇದೀಗ ಗಂಡ ಪೊಲೀಸ್ ಅತಿಥಿಯಾಗಿದ್ದಾನೆ. ಬಂಧಿತನನ್ನು ಬೆಂಗಳೂರು ರಾಮನಗರ ಜಿಲ್ಲೆಯ ಬಿಡದಿ ತಾಲೂಕಿನ ನಂದಗೋಕುಲ ನಿವಾಸಿಯಾಗಿರುವ ವಿಶ್ವನಾಥ (24) ಎಂದು ಗುರುತಿಸಲಾಗಿದೆ.
ವಿಶ್ವನಾಥ ಗೆ ಎರಡು ತಿಂಗಳ ಹಿಂದೆ ಮದುವೆಯಾಗಿತ್ತು. ದಂಪತಿ ಜುಲೈ 22 ರಂದು ರಾತ್ರಿ ಉಜಿರೆಯ ಹೊಟೇಲಿಗೆ ಬಂದು ರೂಂ ಪಡೆದು ತಂಗಿದ್ದರು. ಹೊಟೇಲ್ ರೂಂ ನಲ್ಲಿ ಆರೋಪಿ ವಿಶ್ವನಾಥ ಜುಲೈ 22 ರಂದು ರಾತ್ರಿ ಕುಡಿದ ಮತ್ತಿನಲ್ಲಿ ಪತ್ನಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡಿ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಿ ಪತ್ನಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಜುಲೈ 23 ರಂದು ಸಂಜೆ ಪತಿ ವಿಶ್ವನಾಥ ಎಂಬಾತನ ವಿರುದ್ಧ ದೂರು ನೀಡಿದ್ದಾರೆ.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪತಿ ವಿಶ್ವನಾಥ ವಿರುದ್ಧ BNS 109,115(1), 85 ,4DP (ಕೊಲೆಯತ್ನ, ಹಲ್ಲೆ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಬೇಡಿಕೆ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪತಿ ವಿಶ್ವನಾಥ್ ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಹೆಂಡತಿಯನ್ನು ಹನಿಮೂನ್ ಗೆ ಕರೆದುಕೊಂಡು ಬಂದು ಆಕೆಯ ಮೇಲೆ ಹಲ್ಲೆ ಮಾಡಿದ ಗಂಡ ಇದೀಗ ಜೈಲಿನ ಕಂಬಿ ಎಣಿಸುತ್ತಿದ್ದಾನೆ.