BANTWAL
ಪ್ರಧಾನಿ ಮೋದಿ ಆರೋಗ್ಯ, ಆಯುಷ್ಯ ವೃದ್ದಿಗಾಗಿ ಧರ್ಮಸ್ಥಳದಲ್ಲಿ ಮಹಾ ಮೃತ್ಯುಂಜಯ ಯಾಗ
ಮಂಗಳೂರು ಜನವರಿ 17: ಪ್ರಧಾನಿ ನರೇಂದ್ರ ಮೋದಿ ಆರೋಗ್ಯ, ಆಯುಷ್ಯ ವೃದ್ದಿಗಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಮಹಾ ಮೃತ್ಯುಂಜಯ ಯಾಗ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿದೆ.
ಬೆಳ್ತಂಗಡಿ ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳ ದೇಗುಲದ ಅಮೃತವರ್ಷಿಣಿ ಸಭಾಂಗಣದ ಏಳು ಹೋಮ ಕುಂಡಗಳಲ್ಲಿ ಮಹಾಯಾಗ ಆರಂಭವಾಗಿದ್ದು, ರಾಜ್ಯದ ವಿವಿಧೆಡೆಯ 108 ಪುರೋಹಿತರು ಯಾಗದಲ್ಲಿ ಭಾಗಿಯಾಗಿದ್ದು, ವೇದಮೂರ್ತಿ ನಾಗೇಂದ್ರ ಭಾರದ್ವಾಜ್ ಸುರತ್ಕಲ್ ಅವರ ಪೌರೋಹಿತ್ಯದಲ್ಲಿ ಈ ಯಾಗ ನಡೆಯುತ್ತಿದೆ.
ಬೆಳ್ತಂಗಡಿ ತಾಲೂಕಿನ ಸಮಸ್ತ ಜನತೆಯ ಪರವಾಗಿ ಪ್ರಧಾನಿ ನರೇಂದ್ರ ಮೋದಿಯವರ ದೀರ್ಘಾಯಸ್ಸು ಹಾಗೂ ಆರೋಗ್ಯ ವೃದ್ಧಿಗಾಗಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ ಈ ಯಾಗ ನಡೆಯುತ್ತಿದೆ. ಈಗಾಗಲೇ ಹರೀಶ್ ಪೂಂಜಾ ನೇತೃತ್ವದಲ್ಲಿ ಬೆಳ್ತಂಗಡಿಯ 25 ಕ್ಷೇತ್ರಗಳಲ್ಲಿ ಯಾಗ ನಡೆದಿದ್ದು, ಈ ಎಲ್ಲಾ ಯಾಗಗಳ ಪೂರ್ಣಾಹುತಿ ನೆಲೆಯಲ್ಲಿ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಮಹಾಮೃತ್ಯುಂಜಯ ಯಾಗ ನಡೆಯುತ್ತಿದೆ. ಸಚಿವರಾದ ಈಶ್ವರಪ್ಪ, ಸಿ.ಸಿ.ಪಾಟೀಲ್,ಶಶಿಕಲಾ ಜೊಲ್ಲೆ, ಕೋಟಾ ಶ್ರೀನಿವಾಸ ಪೂಜಾರಿ ಸೇರಿ ಹಲವು ಸಚಿವರು, ಶಾಸಕರು ಯಾಗದಲ್ಲಿ ಭಾಗಿಯಾಗಿದ್ದಾರೆ.
ಬೆಳಗ್ಗೆ 7 ಗಂಟೆಯಿಂದ ಚತುರ್ವೇದ ಪಾರಾಯಣ ಪ್ರಾರಂಭಿಸಿ, ಗೋಪೂಜೆ, ಮಹಾಗಣಪತಿ ಹೋಮ ಬಳಿಕ 11 ಗಂಟೆ ಸುಮಾರಿಗೆ ಮಹಾಮೃತ್ಯುಂಜಯ ಹೋಮ ಸಂಪನ್ನಗೊಳ್ಳಲಿದೆ.
You must be logged in to post a comment Login