KARNATAKA
ಮದ್ಯದ ಬಾಟಲಿಯಿಂದ ಚುಚ್ಚಿ ಕೊಲೆ: ಸ್ನೇಹಿತನಿಂದಲೇ ಕೃತ್ಯ
ಬೆಂಗಳೂರು: ಮದ್ಯದ ಅಮಲಿನಲ್ಲಿ ಸ್ನೇಹಿತರ ಮಧ್ಯೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಸ್ನೇಹಿತನ ಬಾಟಲಿಯಿಂದ ಚುಚ್ಚಿ ಕೊಲೆ ಮಾಡಿದ್ದ ಆರೋಪಿಯನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
(26) ಕೊಲೆಯಾದ ಯುವಕ. ಕೊಲೆ ಆರೋಪದ ಅಡಿ ಉಮೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ‘ಮೃತ ಯುವಕನ ತಂದೆ ವಿಶ್ವನಾಥ್ ಸಿಂಗ್ ದೂರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.
‘ವಿಶ್ವನಾಥ್ ಸಿಂಗ್ ಅವರು ಪತ್ನಿ ಹಾಗೂ ಮಕ್ಕಳ ಜೊತೆ ಕಸ್ತೂರಿನಗರದಲ್ಲಿ ವಾಸವಾಗಿದ್ದಾರೆ. ಮೃತ ಯೋಗೇಂದ್ರ ಆಟೊ ಚಾಲಕರಾಗಿದ್ದರು. 20 ದಿನದ ಹಿಂದಷ್ಟೇ ಕೋಲಾರದ ನರಸಾಪುರದ ಸಾಫ್ಟ್ವೇರ್ ಕಂಪನಿಯ ಮಿನಿ ಬಸ್ ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದು, ಅಲ್ಲಿಯೇ ವಾಸವಾಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
‘ದಸರಾ ರಜೆ ನಿಮಿತ್ತ ಅಕ್ಟೋಬರ್ 12ರಂದು ಮನೆಗೆ ಬಂದಿದ್ದರು. 13ರ ಬೆಳಿಗ್ಗೆ 10ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ಹೋಗಿದ್ದು, ರಾತ್ರಿ 9.30ರ ಸುಮಾರಿಗೆ ಮನೆಗೆ ವಾಪಸ್ ಬಂದಿದ್ದರು. ಆಗ ತಾಯಿ ಬುದ್ಧಿಮಾತು ಹೇಳಿ, ಕೆಲಸಕ್ಕೆ ಹೋಗುವಂತೆ ತಿಳಿಸಿದ್ದರು. ಆಗ ಯೋಗೇಂದ್ರ ಸಿಂಗ್, ಟಿಂಬರ್ ಯಾರ್ಡ್ನಲ್ಲಿ ಕಂಪನಿಯ ಬಸ್ ನಿಲ್ಲಿಸಿದ್ದೇನೆ. ಬಸ್ನಲ್ಲಿ ಮಲಗಿ, ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗುತ್ತೇನೆಂದು ತಾಯಿಗೆ ಹೇಳಿದ್ದರು’ ಎಂದು ಪೊಲೀಸರು ಹೇಳಿದರು.
‘ಮನೆಯಿಂದ ಹೊರಟ ಯೋಗೇಂದ್ರ ಸಿಂಗ್, ಕಸ್ತೂರಿನಗರದ ಸ್ನೇಹಿತ, ಟ್ರಾವೆಲ್ಸ್ನಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಉಮೇಶ್ ಅವರೊಂದಿಗೆ ಮೈಸೂರು ರಸ್ತೆಯಲ್ಲಿರುವ ಕಲಾ ವೈನ್ಸ್ಗೆ ತೆರಳಿದ್ದು, ಪಾರ್ಟಿ ಮಾಡಿದ್ದರು. ಆಗ ಜಗಳ ಆರಂಭವಾಗಿದೆ. ಉಮೇಶ್, ಮದ್ಯ ಬಾಟಲಿಯನ್ನು ಒಡೆದು, ಅದರಿಂದಲೇ ಯೋಗೇಂದ್ರ ಸಿಂಗ್ನ ಹೊಟ್ಟೆ ಹಾಗೂ ದೇಹದ ಇತರೆ ಭಾಗಕ್ಕೆ ಇರಿದು ಕೊಲೆ ಮಾಡಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದರು.
You must be logged in to post a comment Login