LATEST NEWS
ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ಮತ್ತೆ ಭೂಕುಸಿತ – ಸಂಚಾರ ಬಂದ್

ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ಮತ್ತೆ ಭೂಕುಸಿತ – ಸಂಚಾರ ಬಂದ್
ಮಂಗಳೂರು ಜೂನ್ 13: ರಾಜ್ಯದ ಮಲೆನಾಡಿನಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಚಾರ್ಮಾಡಿ ಘಾಟ್ನಲ್ಲಿ ಮತ್ತೆ ಭೂ ಕುಸಿತ ಉಂಟಾಗಿ ಸಂಚಾರ ಸಂಪೂರ್ಣ ಬಂದ್ ಆಗಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಾರ್ಮಾಡಿಘಾಟ್ ನಲ್ಲಿ ಮತ್ತೆ ಭೂಮಿ ಕುಸಿದಿದೆ. ಘಾಟ್ ನ 4, 7, 8 ಮತ್ತು 9ನೇ ತಿರುವಿನಲ್ಲಿ ಭೂಕುಸಿತ ಉಂಟಾಗಿದ್ದು. ಸ್ಥಳಕ್ಕೆ ಜಿಲ್ಲಾಡಳಿತದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈಗಾಗಲೇ ಗುಡ್ಡ ಕುಸಿತದ ತೆರವು ಕಾರ್ಯಾಚರಣೆಯನ್ನು ಆರಂಭಿಸಲಾಗಿದ್ದು, 9 ಜೆಸಿಬಿ, 2 ಹಿಟಾಚಿ ಯಂತ್ರ ಬಳಸಿ ಭೂ ಕುಸಿತ ಉಂಟಾಗಿರುವುದನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಮತ್ತೆ ಗುಡ್ಡ ಕುಸಿದ ಹಿನ್ನಲೆಯಲ್ಲಿ ಚಾರ್ಮಾಡಿ ಘಾಟ್ ಮಾರ್ಗವನ್ನು ಬಂದ್ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಇಂದು, ನಾಳೆ ಹಾಗೂ ನಾಡಿದ್ದು ಘಾಟ್ನಲ್ಲಿ ರಸ್ತೆ ಸಂಚಾರವನ್ನು ಬಂದ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.
ಸೋಮವಾರ ಸುರಿದ ಮಳೆಗೆ ಎರಡನೇ ತಿರುವಿನಲ್ಲಿದ್ದ ತಡೆಗೋಡೆ ಕುಸಿದು ರಸ್ತೆ ಬಂದ್ ಆಗಿ ಸೋಮವಾರ ತಡರಾತ್ರಿಯಿಂದ ಘಾಟಿಯಲ್ಲಿ ಸಿಲುಕಿಕೊಂಡು ಸಾಲುಗಟ್ಟಿ ನಿಂತಿದ್ದ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಾಗ ಮಂಗಳವಾರ ಮಧ್ಯಾಹ್ನ 3 ಗಂಟೆಯಾಗಿತ್ತು. ಘಾಟ್ನಲ್ಲಿ ಅನ್ನ, ನೀರು ಇಲ್ಲದೆ ಸಿಲುಕಿ ಹಾಕಿಕೊಂಡಿದ್ದ 3 ಸಾವಿರಕ್ಕೂ ಅಧಿಕ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.
ಈ ನಡುವೆ ಮತ್ತೆ ಮತ್ತೆ ಭೂ ಕುಸಿತ ಉಂಟಾಗಿರುವುದರಿಂದ ಮತ್ತೆ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಈ ಮಾರ್ಗವಾಗಿ ಚಲಿಸುವ ಪ್ರಯಾಣಿಕರು ಇನ್ನಿಲ್ಲದ ಪಾಡು ಪಡುವಂತಾಗಿದೆ.