Connect with us

    LATEST NEWS

    ನಾಮಕರಣ ಹೆಸರಿನಲ್ಲಿ ಮತ್ತೆ ಮಂಗಳೂರಿನಲ್ಲಿ ಹಗ್ಗ-ಜಗ್ಗಾಟ

    ಮಂಗಳೂರು, ಸೆಪ್ಟಂಬರ್ 22: ಮಂಗಳೂರಿನಲ್ಲಿ ಮತ್ತೆ ನಾಮಕರಣದ ವಿಚಾರದಲ್ಲಿ ಚರ್ಚೆ ಆರಂಭಗೊಂಡಿದೆ. ಈ ಬಾರಿಯ ನಾಮಕರಣದ ವಿಷಯ ಲೇಡಿಹಿಲ್ ನಲ್ಲಿ ನೂತನವಾಗಿ ನಿರ್ಮಾಣಗೊಂಡ ವೃತ್ತಕ್ಕೆ ಯಾರ ಹೆಸರು ಇಡುವುದು ಎನ್ನುವುದಾಗಿದೆ. ಲೇಡಿಹಿಲ್ ನಲ್ಲಿ ಕ್ರಿಶ್ಚಿಯನ್ ಮಿಷನರಿಗೆ ಸೇರಿದ ಚರ್ಚ್, ವಿದ್ಯಾಸಂಸ್ಥೆಗಳು ಇರುವ ಕಾರಣ ಈ ವೃತ್ತಕ್ಕೆ ಲೇಡಿಹಿಲ್ ವೃತ್ತ ಎಂದೇ ಹೆಸರಿಡಬೇಕು ಎಂದು ಕ್ರಿಶ್ಚಿಯನ್ ಸಮುದಾಯ ಇದೀಗ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.

    ಮಂಗಳೂರು ಮಹಾನಗರ ಪಾಲಿಕೆ ತನ್ನ ಸಾಮಾನ್ಯ ಸಭೆಯಲ್ಲಿ ಲೇಡಿಹಿಲ್ ನಿಂದ ನ್ಯೂಚಿತ್ರಾ ಸಿನಿಮಾ ಥಿಯೇಟರ್ ವರೆಗಿನ ರಸ್ತೆಗೆ ಶ್ರೀ ಗೋಕರ್ಣನಾಥ ಕ್ಷೇತ್ರ ರಸ್ತೆ ಎಂದು ನಾಮಕರಣ ಮಾಡಲು ನಿರ್ಣಯ ತೆಗೆದುಕೊಂಡಿದೆ. ಆದರೆ ಮಹಾನಗರ ಪಾಲಿಕೆಯ ಈ ನಿರ್ಣಯಕ್ಕೆ ಇದೀಗ ಕ್ರಿಶ್ಚಿಯನ್ ಸಮುದಾಯ ವಿರೋಧ ವ್ಯಕ್ತಪಡಿಸಲು ಆರಂಭಿಸಿದೆ. ಲೇಡಿಹಿಲ್ ಜಂಕ್ಷನ್ ಗೆ ಚಾರಿತ್ರಿಕೆ ಮಹತ್ವವಿದ್ದು, ಅಪೋಸ್ತಲಿಕ್ ಕಾರ್ಮೆಲ್ ಸಿಸ್ಟರ್ಸ್ ಮದರ್ ನಜರಲ್ ಮಾರಿ ದೇಸ್ ಆಂಜ್ 1885 ರಲ್ಲಿ ಮಂಗಳೂರಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಸ್ಥಳೀಯರು ಹೆಣ್ಣು ಮಕ್ಕಳಿಗಾಗಿ ಒಂದು ಶಾಲೆ ತೆರೆಯುವಂತೆ ಅವರಲ್ಲಿ ವಿನಂತಿಸಿದ್ದರು.

    ಈ ಕಾರಣಕ್ಕಾಗಿ ಲೇಡಿಹಿಲ್ ನಲ್ಲಿ ಹೆಣ್ಣು ಮಕ್ಕಳಿಗಾಗಿ ಶಾಲೆಯನ್ನು ತೆರೆಯಲಾಗಿತ್ತು. ಅಲ್ಲದೆ ಇದೊಂದು ಗುಡ್ಡ ಪ್ರದೇಶವೂ ಆಗಿರುವುದರಿಂದ ಅಂದಿನ ಜನ ಹೆಣ್ಣು ಮಕ್ಕಳಿಗೆ ಗೌರವಕ್ಕಾಗಿ ಆ ಪ್ರದೇಶಕ್ಕೆ ಲೇಡಿಹಿಲ್ ಎಂದು ಹೆಸರಿಟ್ಟಿದ್ದರು. ಈ ಕಾರಣಕ್ಕಾಗಿ ಲೇಡಿಹಿಲ್ ನಲ್ಲಿ ನಿರ್ಮಾಣಗೊಳ್ಳಲಿರುವ ವೃತ್ತಕ್ಕೆ ಲೇಡಿಹಿಲ್ ವೃತ್ತ ಎಂದೇ ಹೆಸರಿಡಬೇಕು ಎಂದು ಕ್ರಿಶ್ಚಿಯನ್ ಸಮುದಾಯ ಇದೀಗ ಪಟ್ಟು ಹಿಡಿಯಲಾರಂಭಿಸಿದೆ.

    ಈ ನಡುವೆ ಲೇಡಿಹಿಲ್ ಮೂಲಕವೇ ಗೋಕರ್ಣನಾಥ್ ಕ್ಷೇತ್ರಕ್ಕೆ ದಾರಿಯಿರುವ ಕಾರಣ ಈ ರಸ್ತೆಗೆ ಗೋಕರ್ಣನಾಥೇಶ್ವರ ರಸ್ತೆ ಎಂದು ಹೆಸರಿಡುವ ನಿರ್ಣಯಕ್ಕೆ ಬಿಲ್ಲವ ಸಮುದಾಯ ಬೆಂಬಲ ವ್ಯಕ್ತಪಡಿಸಿದೆ. ಮಂಗಳೂರು ದಸರಾ ಎಂದೇ ಖ್ಯಾತವೆತ್ತಿರುವ ಗೋಕರ್ಣನಾಥ ಕ್ಷೇತ್ರ ಅತ್ಯಂತ ಪ್ರಸಿದ್ಧ ಪ್ರವಾಸಿ ಕ್ಷೇತ್ರವೆಂದೂ ಗುರುತಿಸಿಕೊಂಡಿದೆ. ಈ ಕಾರಣಕ್ಕಾಗಿ ನೂತನ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡಬೇಕೆಂದು ಬಿಲ್ಲವ ಸಮುದಾಯವೂ ಇದೀಗ ಒತ್ತಾಯಿಸಲಾರಂಭಿಸಿದೆ. ಈ ಹಿನ್ನಲೆಯಲ್ಲಿ ಇದೀಗ ಎರಡೂ ಕಡೆಯಿಂದ ವೃತ್ತದ ನಾಮಕರಣಕ್ಕಾಗಿ ಹಗ್ಗಜಗ್ಗಾಟ ಆರಂಭಗೊಂಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply