ಉಡುಪಿ ನವೆಂಬರ್ 6: ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಲಿದೆ ಎಂದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಇದೀಗ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ತಮ್ಮ ಹಗಲುಗನಸನ್ನು ನಿಲ್ಲಿಸಲಿ. ರಾಜ್ಯದ ಎಲ್ಲಾ ಸಂಕಷ್ಟದ ಕಾಲದಲ್ಲಿ ಯಡಿಯೂರಪ್ಪ ಸಮರ್ಥವಾಗಿ ಅಧಿಕಾರ ನಿರ್ವಹಿಸಿದ್ದಾರೆ.

ಸಿದ್ದರಾಮಯ್ಯಗೆ ಅಲ್ಲಾವುದ್ದಿನ ಯಾವ ಅದ್ಭುತ ದೀಪ ಮಾಹಿತಿ ಕೊಟ್ಟಿದೆಯೋ ಗೊತ್ತಿಲ್ಲ. ಬಿಎಸ್ ವೈ ರಾಜ್ಯದ ಸರ್ವೋಚ್ಚ ಮುಖಂಡರು. ಯಡಿಯೂರಪ್ಪ ಶಾಶ್ವತ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಅಲ್ಲದೆ ಕೇಂದ್ರ ಮತ್ತು ರಾಜ್ಯದ ಎಲ್ಲ ನಾಯಕರ ಸಹಮತ ಯಡಿಯೂರಪ್ಪಗೆ ಇದೆ ಎಂದರು.
ಉಪಚುನಾವಣೆ ನಂತರ ಡಿಕೆಶಿ ದೆಹಲಿ ಪ್ರವಾಸವಿದೆ. ಕಾಂಗ್ರೆಸ್ನ ಆಂತರಿಕ ವಿಚಾರದಲ್ಲಿ ನಾವು ಮೂಗು ತೂರಿಸಲ್ಲ. ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಡಿಕೆಶಿಗೆ ಮಾಹಿತಿ ಸಿಕ್ಕಿರಬಹುದು. ಡಿಕೆಶಿ ಸಿದ್ದರಾಮಯ್ಯ ಮೇಲೆ ಮುನಿಸಿಕೊಂಡಿರಬಹುದು. ಹೀಗಾಗಿ ಸಿದ್ದರಾಮಯ್ಯನ ಮೇಲೆ ದೂರು ಕೊಡಲು ದೆಹಲಿ ಪ್ರವಾಸ ಮಾಡಿರಬಹುದು. ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ ಎಂದರು.