KARNATAKA
ಬೆಂಗಳೂರು : ಕಿಲ್ಲರ್ ಬಿಎಂಟಿಸಿಗೆ ಕಾಲೇಜು ವಿದ್ಯಾರ್ಥಿನಿ ಬಲಿ..!

ಬೆಂಗಳೂರು : ಕಿಲ್ಲರ್ ಬಿಎಂಟಿಸಿ ಬಸ್ ಸ್ಕೂಟರಿಗೆ ತಾಗಿ ಎಳೆದೊಯ್ದ ಪರಿಣಾಮ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಮಲ್ಲೇಶ್ವರಂ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.
ಕುಸುಮಿತಾ(21) ಮೃತಪಟ್ಟ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಆರ್ಆರ್ ನಗರದ ಜೈನ್ ಕಾಲೇಜಿನಲ್ಲಿ ಎರಡನೇ ವರ್ಷದ ಬಿಇ ವ್ಯಾಸಂಗ ಮಾಡುತ್ತಿದ್ದಳು.ಮಲ್ಲೇಶ್ವರಂ ನಿವಾಸಿಯಾದ ಕುಸುಮಿತಾ ಅವರು ಮನೆಯಿಂದ ಕಾಲೇಜಿಗೆ ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ಬೆಳಗ್ಗೆ 8.30ರ ಸುಮಾರಿನಲ್ಲಿ ಮಹಾಕವಿ ಕುವೆಂಪು ರಸ್ತೆಯ ದೇವಯ್ಯ ಪಾರ್ಕ್ ಬಳಿ ಬಿಎಂಟಿಸಿ ಬಸ್ ಸ್ಕೂಟರ್ಗೆ ತಾಗಿದ ಪರಿಣಾಮ ಕೆಳಗೆ ಬಿದ್ದಿದ್ದಾರೆ.ತಾಗಿದ ರಭಸಕ್ಕೆ ಬಸ್ 10ರಿಂದ 15 ಅಡಿ ಸ್ಕೂಟರ್ ಜೊತೆ ವಿದ್ಯಾರ್ಥಿನಿಯನ್ನು ಎಳೆದೊಯ್ದ ಪರಿಣಾಮ ಮೈಯೆಲ್ಲಾ ತರಚಿ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ವಿದ್ಯಾರ್ಥಿನಿಯನ್ನು ಕೆಸಿ ಜನರಲ್ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಸುದ್ದಿ ತಿಳಿದ ಮಲ್ಲೇಶ್ವರಂ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
