DAKSHINA KANNADA
ಮಂಗಳೂರಿನಲ್ಲಿ ಹೆಚ್ಚುತ್ತಿರುವ ಗೋ ಅಪಹರಣ : ನಿದ್ದೆಯಲ್ಲಿರುವ ಜಿಲ್ಲಾಡಳಿತ

ಮಂಗಳೂರಿನಲ್ಲಿ ಹೆಚ್ಚುತ್ತಿರುವ ಗೋ ಅಪಹರಣ : ನಿದ್ದೆಯಲ್ಲಿರುವ ಜಿಲ್ಲಾಡಳಿತ
ಮಂಗಳೂರು, ಜುಲೈ 19 : ಮಂಗಳೂರು ನಗರದಲ್ಲಿ ಗೋ ಅಪಹರಣ ದಿನೇದಿನೆ ಹೆಚ್ಚಾಗುತ್ತಿದೆ. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಇಂತಹ ಪ್ರಕರಣಗಳು ಮಿತಿ ಮೀರಿವೆ.
ಆದರೆ ಇದನ್ನು ಮಟ್ಟ ಹಾಕಬೇಕಾದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮಾತ್ರ ಕಣ್ಮುಚ್ಚಿ ಕುಂಭಕರ್ಣ ನಿದ್ರೆ ಮಾಡುತ್ತಿದೆ.

ಅಕ್ರಮ ಗೋಕಳ್ಳರನ್ನು ಸದೆ ಬಡಿದು ಗೋವುಗಳ ಅಪಹರಣ ಮಟ್ಟ ಹಾಕಲು ಅನುಷ್ಟಾನಕ್ಕೆ ತಂದ ರೌಡಿ ನಿಗ್ರಹಣ ದಳ ಕೂಡ ಈ ಕೆಲಸ ಬಿಟ್ಟು ಸ್ವಾದಾಯ ಹೆಚ್ಚಿಸುವ ಕಾರ್ಯದಲ್ಲಿ ಮಗ್ನವಾಗಿದೆ.
ಗೋ ಕಳ್ಳರಿಗೆ ಕಾನೂನಿನ ಭಯವೇ ಇಲ್ಲದಂತಾಗಿದ್ದು, ಹಾಡು ಹಗಲು, ರಾತ್ರಿ ಹಟ್ಟಿಯಲ್ಲಿರುವ ದನಗಳನ್ನು ಬಲವಂತದಿಂದ ಅಪಹರಿಸಿ ಕೊಂಡೊಯ್ಯಲಾಗುತ್ತಿದೆ.
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಪ್ರಕರಣಗಳು ದಿನೇ ದಿನೆ ಹೆಚ್ಚಗುತ್ತಿರುವುದು ಕಳವಳವಳಕಾರಿ ಸಂಗತಿಯಾಗಿದೆ.
2 ದಿನಗಳ ಹಿಂದೆ ಮಂಗಳೂರಿನ ಹೊರ ವಲಯದ ಮೂಡುಶೆಡ್ಡೆ ಯ ಬೊಟ್ಟಶೆಟ್ಟಿ ಬೈಲು ಎಂಬಲ್ಲಿ ಮಾರಕಸ್ತ್ರಗಳೊಂದಿಗೆ ಮಧ್ಯ ರಾತ್ರಿ ಹಟ್ಟಿಗೆ ನುಗ್ಗಿದ ಗೋ ಕಳ್ಳರು ಹಾಲು ಕರೆಯುವ 2 ಉತ್ಕೃಷ್ಟ ತಳಿಯ ದನಗಳನ್ನು ಅಪಹರಿಸಿದ್ದಾರೆ.
ಇದೇ ಮನೆಯಿಂದ ಇದು 2 ನೇ ಪ್ರಕರಣವಾಗಿದೆ.
6 ಮಂದಿಯ ತಂಡ ಮನೆಯ ನಾಯಿಯನ್ನು ವಿಷವಿಕ್ಕಿ ಸಾಯಿಸಿ ಈ ದುಷ್ಕೃತ್ಯ ವೆಸಗಿದ್ದಾರೆ.
ಪಕ್ಕದ ಮನೆಯಿಂದಲೂ ನಾಲ್ಕು ದನಗಳನ್ನು ಇದೇ ಮಾದರಿಯಲ್ಲಿ ಅಪಹರಿಸಲಾಗಿದೆ. ತಡೆಯಲು ಬಂದ ಮನೆಯವರಿಗೆ ತಲವಾರು ತೋರಿಸಿ ಜೀವ ಬೆದರಿಕೆ ಕೂಡ ಹಾಕಿದ್ದಾರೆ.
ಇಂತಹ ಘಟನೆಗಳನ್ನು ನೋಡಿದರೆ ಈ ಭಾಗದಲ್ಲಿ ಕಾನೂನು ವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುವುದನ್ನು ಮನಗಾಣಬಹುದಾಗಿದೆ.
ಕಳೆದ 6 ತಿಂಗಳುಗಳ ಇಚೇಗೆ ಈ ಮೂಡುಶೆಡ್ಡೆ ಪ್ರದೇಶದಲ್ಲಿ ಒಟ್ಟು 21 ದನಗಳನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ.
ಇಂತಹ ಪ್ರಕರಣಗಳು ಮತ್ತೆ ಮತ್ತೆ ಜಿಲ್ಲೆಯಲ್ಲಿ ಮರುಕಳಿಸಿದರೆ ಕೋಮುಸೂಕ್ಷ್ಮ ಕುಖ್ಯಾತಿ ಪಡೆದಿರುವ ಕರಾವಳಿಯಲ್ಲಿ ಮತ್ತೆ ಅಶಾಂತಿಯ ವಾತಾವರಣ ನಿರ್ಮಾಣವಾಗಿ ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ಗತ ಕಾಲಕ್ಕೆ ಮರಳುವ ಮುನ್ನ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತು ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅವಶ್ಯಕತೆ ಇದೆ.