ಪುತ್ತೂರು ಅಗಸ್ಟ್ 10: ಇಂದು ವಕ್ಫ್ ಬೋರ್ಡ್ ಹೆಸರಿನಲ್ಲಿ ಕಂಡ ಕಂಡ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಇದನ್ನು ತಡೆಯಲು ಕೇಂದ್ರ ಸರಕಾರ ವಕ್ಫ್ ಕಾನೂನಿನಲ್ಲಿ ತಿದ್ದುಪಡಿ ತರಲು ನಿರ್ಧರಿಸಿದೆ ಆದರೆ ಈ ವಿಚಾರವನ್ನಿಟ್ಟು ಪ್ರತಿಪಕ್ಷಗಳು ಸದನದಲ್ಲಿ ಗದ್ದಲ ಎಬ್ಬಿಸುತ್ತಿದೆ ಎಂದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.

ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯುವ ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ನ ಮಂಗಳೂರು ವಿಭಾಗದ ಅಭ್ಯಾಸ ವರ್ಗಕ್ಕೆ ಚಾಲನೆ ನೀಡಿ ಮಾತನಾಡಿದರು. ವಕ್ಫ ಬೋರ್ಡ್ ಕಾನೂನು ತಿದ್ದುಪಡಿ ತಂದರೆ ವಿರೋಧ ಪಕ್ಷ ಮುಸಲ್ಮಾನರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದೆ.

ಮುಸ್ಲಿಮರ ಮೇಲೆ ವಿಶ್ವದ ಎಲ್ಲೇ ದಾಳಿಯಾದರೂ ಪ್ರತಿಪಕ್ಷಗಳು ಸಂಸತ್ತಿನಲ್ಲಿ ಮಾತನಾಡುತ್ತದೆ. ಆದರೆ ಕಳೆದ ಒಂದು ವಾರದಿಂದ ಬಾಂಗ್ಲಾ ದೇಶದಲ್ಲಿ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿಯಾಗುತ್ತಿದೆ .ಹೆಣ್ಣುಮಕ್ಕಳ,ಪುರುಷರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಆದರೆ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಮೌನವಾಗಿದೆ ಎಂದು ಆರೋಪಿಸಿದರು.
ಹಿಂದೆ ಹಿಜಾಬ್ ವಿಚಾರದಲ್ಲಿ ಉಡುಪಿಯಲ್ಲಿ ಗಲಾಟೆ ನಡೆದಾಗ ಇಡೀ ವಿಶ್ವ ಭಾರತವನ್ನು ಪ್ರಶ್ನಿಸಿತ್ತು, ಸೌದಿ,ಪಾಕಿಸ್ತಾನ ಅಮೇರಿಕಾದಂತಹ ದೇಶಗಳು ಭಾರತವನ್ನು ಪ್ರಶ್ನಿಸಿತ್ತು, ಆದರೆ ಬಾಂಗ್ಲಾದ ಹಿಂದೂಗಳ ಮೇಲೆ ದೌರ್ಜನ್ಯವಾದಾಗ ಯಾರೂ ಮಾತಾಡಿಲ್ಲ, ದೇಶದ ಮುಸ್ಲಿಂ ನಾಯಕರು 2047 ಇಸವಿಗೆ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡುತ್ತೇವೆಂದು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ.
ಒವೈಸಿ ಎನ್ನುವ ಸಂಸದ ಮುಂದಿನ ಪ್ರಧಾನಿ ಬುರ್ಖಾ ಧರಿಸಿದ ಮಹಿಳೆ ಎಂದು ಹೇಳುತ್ತಾನೆ. ಆದರೆ ಹಿಂದೂ ನಾಯಕರು ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ, ಹಿಂದೂಗಳ ಮೇಲೆ ನಿರಂತರ ಆಕ್ರಮಣಗಳು ನಡೆಯುತ್ತಿದೆ. ಹಿಂದೂ ಬದುಕುಳಿದರೆ ಮಾತ್ರ ಭಾರತ ಬದುಕುತ್ತದೆ ಎಂದರು.