Connect with us

    DAKSHINA KANNADA

    ಮಾಡದ ತಪ್ಪಿಗೆ ಜೈಲುಶಿಕ್ಷೆ ಅನುಭವಿಸಿ ರಿಯಾದ್ ನಿಂದ ಬಂದ ಮಗ ಚಂದ್ರಶೇಖರ್ ನೋಡಿ ಕಣ್ಣೀರಿಟ್ಟ ತಾಯಿ…!!

    ಕಡಬ ಅಕ್ಟೋಬರ್ 21: ಸೌದಿ ಅರೇಬಿಯಾದ ಜೈಲಿನಲ್ಲಿ 11 ತಿಂಗಳ ಕಾಲ ಸೆರೆಮನೆ ವಾಸದ ಬಳಿಕ ಈಗ ಬಂಧಮುಕ್ತವಾಗಿ ಭಾರತಕ್ಕೆ ವಾಪಸಾಗಿರುವ ಕಡಬದ ಚಂದ್ರಶೇಖರ್ ಅವರು ಸುರಕ್ಷಿತವಾಗಿ ಕಡಬ ತಾಲೂಕಿನ ಐತೂರಿನಲ್ಲಿರುವ ತಮ್ಮ ಮನೆ ಸೇರಿದ್ದಾರೆ.


    ಸೋಮವಾರ ರಾತ್ರಿ ಚಂದ್ರಶೇಖರ್ ಅವರು ವಿಮಾನದಲ್ಲಿ ಸೌದಿಯ ರಿಯಾದ್​ನಿಂದ ಮುಂಬೈಗೆ ಬಂದು ಅಲ್ಲಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಇದೇ ವೇಳೆ ಅವರ ತಾಯಿ ಹೇಮಾವತಿ, ಅಣ್ಣ ಹರೀಶ್ ಸೇರಿದಂತೆ ಹಲವರು ಅವರನ್ನು ಸ್ವಾಗತಿಸಿದರು. ತಾಯಿ ಸಂತೋಷದಿಂದ ಮಗನನ್ನು ಆಲಂಗಿಸಿ ಬರಮಾಡಿಕೊಂಡರು. ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಚಂದ್ರಶೇಖರ್​ ಅವರನ್ನು ಬಂಧಿಸಲಾಗಿತ್ತು. ಚಂದ್ರಶೇಖರ್ ಅವರ ಖಾತೆಗೆ ಮಹಿಳೆಯೊಬ್ಬರ ಖಾತೆಯಿಂದ 22 ಸಾವಿರ ರೂಪಾಯಿ ವರ್ಗಾವಣೆಯಾಗಿತ್ತು. ಇದು ದಾಖಲೆಗಳನ್ನು ನಕಲಿ ಮಾಡಿ ಹಣ ದೋಚುವ ಕೆಲವು ದುಷ್ಕರ್ಮಿಗಳ ಸಂಚಾಗಿದ್ದು, ಚಂದ್ರಶೇಖರ್ ಅವರ ಹೆಸರಿನಲ್ಲಿ ನಕಲಿ ಖಾತೆಯನ್ನು ತೆರೆದು ಈ ಕೃತ್ಯ ಎಸಗಲಾಗಿತ್ತು. ಚಂದ್ರಶೇಖರ್​ ಅವರ ವಾದವನ್ನು ಪರಿಗಣಿಸದೆ ಪೊಲೀಸರು ಅವರನ್ನು ಜೈಲಿಗೆ ಹಾಕಿದ್ದರು.


    ಬೆಂಗಳೂರಿನಲ್ಲಿದ್ದ ಚಂದ್ರಶೇಖರ್ ಬಡ್ತಿ ಪಡೆದು ಕೆಲಸಕ್ಕಾಗಿ 2022ರಲ್ಲಿ ಸೌದಿ ಅರೇಬಿಯಾಗೆ ತೆರಳಿದ್ದರು. ಅಲ್ಲಿ ಅಲ್ಪಾನರ್​ ಸೆರಾಮಿಕ್​ ಎಂಬ ಕಂಪನಿಯಲ್ಲಿ ಕೆಲಸಕ್ಕಿದ್ದರು. 2022 ನವೆಂಬರ್​ನಲ್ಲಿ ಅವರು ಮೊಬೈಲ್ ಹಾಗೂ ಸಿಮ್ ಖರೀದಿಗೆಂದು ರಿಯಾದ್​ನ ಅಂಗಡಿಗೆ ತೆರಳಿ, ಸಹಿ, ಬೆರಳಚ್ಚು ಹಾಗೂ ಇತರ ವಿವರಗಳನ್ನು ಎರಡು ಬಾರಿ ನೀಡಿದ್ದರು. ನಂತರ ಮೊಬೈಲ್​ಗೆ ಬಂದ ಕರೆಯೊಂದಕ್ಕೆ, ಹೊಸ ಸಿಮ್​ ಕಾರ್ಡ್​ ಬಗ್ಗೆ ಮಾಹಿತಿ ಜೊತೆಗೆ ಒಟಿಪಿಯನ್ನೂ ಹೇಳಿದ್ದರು. ಆ ವೇಳೆ ಚಂದ್ರಶೇಖರ್​ ಅವರ ಖಾತೆ ಹ್ಯಾಕ್ ಆಗಿತ್ತು. ಇದಾದ ಒಂದು ವಾರದಲ್ಲಿ ಅಲ್ಲಿನ ಪೊಲೀಸರು ಬಂದು ಚಂದ್ರಶೇಖರ್​ ಅವರನ್ನು ಬಂಧಿಸಿದ್ದರು. ಪೊಲೀಸರು ಬಂಧಿಸಲು ಬಂದಾಗಲೇ ಚಂದ್ರಶೇಖರ್​ ಅವರಿಗೆ ಇದು ಅರಿವಿಗೆ ಬಂದಿತ್ತು . ಇದೀಗ ಎಲ್ಲವೂ ಸುಖಾಂತ್ಯ ಕಂಡಿದ್ದು ಚಂದ್ರ ಶೇಖರ್ ಸುರಕ್ಷಿತವಾಗಿ ತಾಯಿ ಮಡಿಲು ಸೇರಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply