DAKSHINA KANNADA
ಉಳ್ಳಾಲ ನಗರಸಭೆಯ ಗೋಸ್ಬಾರಿ, ಕಸದ ವಾಹನದಲ್ಲಿ ಕನ್ನಡಾಂಬೆ ವೇಷಧಾರಿ

ಉಳ್ಳಾಲ ನಗರಸಭೆಯ ಗೋಸ್ಬಾರಿ, ಕಸದ ವಾಹನದಲ್ಲಿ ಕನ್ನಡಾಂಬೆ ವೇಷಧಾರಿ
ಮಂಗಳೂರು,ನವಂಬರ್ 3: ಕನ್ನಡ ರಾಜ್ಯೋತ್ಸವದ ದಿನ ರಾಜ್ಯ ಆಹಾರ ಸಚಿವ ಯು.ಟಿ.ಖಾದರ್ ಕ್ಷೇತ್ರವಾದ ಉಳ್ಳಾಲದಲ್ಲಿ ಅಪಚಾರವೊಂದು ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಉಳ್ಳಾಲ ನಗರಸಭೆಯ ವತಿಯಿಂದ ಆಚರಿಸಲಾದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಭುವನೇಶ್ವರಿ, ರಾಣಿ ಅಬ್ಬಕ್ಕ ಹಾಗೂ ಒನಕೆ ಓಬವ್ವಾ ರ ವೇಷಧಾರಿಗಳನ್ನು ನಗರಸಭೆಯ ಕಸ ವಿಲೇವಾರಿ ಮಾಡುವ ವಾಹನದಲ್ಲಿ ಮೆರವಣಿಗೆ ನಡೆಸಿರುವ ಚಿತ್ರವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಡೀ ನಾಡಿಗೆ ನಾಡೇ ನವಂಬರ್ 1 ರಂದು ಕನ್ನಡಾಂಬೆಯ ತೇರನ್ನು ಎಳೆದು ಸಂಭ್ರಮಿಸಿದರೆ, ಸಚಿವ ಯು.ಟಿ.ಖಾದರ್ ಕ್ಷೇತ್ರದಲ್ಲಿ ಕನ್ನಡ ಭುವನೇಶ್ವರಿಗೆ ಅವಮಾನ ಮಾಡಿರುವುದು ಭಾರೀ ಆಕ್ರೋಶಕ್ಕೂ ಕಾರಣವಾಗಿದೆ. ಅದ್ದೂರಿಯಾಗಿ ಕಾರ್ಯಕ್ರಮ ನಡೆಸಿರುವ ಉಳ್ಳಾಲ ನಗರಸಭೆ ಕನ್ನಡಾಂಬೆಯ ಹಾಗೂ ವೀರ ವನಿತೆಯರಾದ ರಾಣಿ ಅಬ್ಬಕ್ಕ ಹಾಗೂ ಒನಕೆ ಓಬವ್ವಾ ವೇಷಧಾರಿಗಳಿಗಾಗಿ ಕಸ ವಿಲೇವಾರಿಯ ವಾಹನವನ್ನು ನೀಡಿರುವುದು ಉಳ್ಳಾಲ ನಗರಸಭೆಯ ಸಂಸ್ಕೃತಿಯೋ , ವಿಕೃತಿಯೋ ಎನ್ನುವುದು ತಿಳಿಯಬೇಕಿದೆ. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕನ್ನಡದ ಗುತ್ತಿಗೆಯನ್ನು ಪಡೆದ ಹಾಗೂ ಉಳ್ಳಾಲದಲ್ಲಿ ಕನ್ನಡದ ಕಾರ್ಯಕ್ರಮ ನಡೆಯುವಾಗ ಉಸ್ತುವಾರಿ ವಹಿಸಿಕೊಳ್ಳಬೇಕಾಗಿದ್ದ ಸಂಘಗಳು ಇದೀಗ ಧಿಡೀರನೆ ಎಚ್ಚೆತ್ತುಕೊಂಡಿದೆ.
ಉಳ್ಳಾಲ ನಗರಸಭೆಯಿಂದ ಕನ್ನಡ ಭುವನೇಶ್ವರಿಗೆ ಮಾಡಿದ ಈ ಅವಮಾನವನ್ನು ಖಂಡಿಸಿ ನಾಳೆ ಉಳ್ಳಾಲ ನಗರಸಭೆಯ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
Continue Reading