LATEST NEWS
ಅಕ್ರಮವಾಗಿ ಭಾರತೀಯ ಜಲಸೀಮೆ ಪ್ರವೇಶ : ಮೂವರು ಆರೋಪಿಗಳಿಗೆ ದಂಡ

ಉಡುಪಿ, ಜೂನ್ 27 : ಮಂಗಳೂರು ಕೊಸ್ಟ್ ಗಾರ್ಡ್ ಪ್ರಧಾನ ಅಧಿಕಾರಿ ಸುಖ್ವಿಂದರ್ ಸಿಂಗ್ ಅವರು 2025 ರ ಫೆಬ್ರವರಿ 24 ರಂದು ತಮ್ಮ ಸಿಬ್ಬಂದಿಯೊಂದಿಗೆ ಸಮುದ್ರಗಸ್ತಿನಲ್ಲಿರುವಾಗ ಓಮನ್ ದೇಶದ ಬೋಟ್ ಹಾಗೂ ಅದರಲ್ಲಿ 3 ಜನ ಮೀನುಗಾರರು ಅಕ್ರಮವಾಗಿ ಭಾರತೀಯ ಜಲಸೀಮೆಯೊಳಗೆ ಪ್ರವೇಶಿಸಿರುವುದು ಕಂಡು ಬಂದಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದು, ಮಲ್ಪೆ ಕರಾವಳಿ ಕಾವಲು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಲೋಕೇಶ ಎ.ಸಿ ಈ ಬಗ್ಗೆ ಪ್ರಕರಣ ದಾಖಲಿಸಿರುತ್ತಾರೆ.
ಭಾರತೀಯ ಪ್ರಜೆಗಳಾದ ಜೇಮ್ಸ್ ಫ್ರಾಂಕ್ಲಿನ್, ರಾಬಿನ್ಸ್ಟನ್ ಹಾಗೂ ಟಿರೋಸ್ @ ಡಿರೋಸ್ ಎಂಬ 3 ಜನ ಆಪಾದಿತರು ಓಮಾನ್ ದೇಶದಲ್ಲಿ ಮೀನುಗಾರಿಕೆ ಕೆಲಸಕ್ಕೆಂದು ಹೋಗಿದ್ದು, ವಿದೇಶದಲ್ಲಿ ಸಂಪಾದನೆ ಕುಂಠಿತಗೊಂಡಿದ್ದು. ಅಲ್ಲದೆ 3 ಜನ ಆಪಾದಿತರುಗಳ ಮೂಲ ಪಾಸ್ಪೋರ್ಟ್ಗಳು ಓಮಾನ್ ದೇಶದ ಬೋಟಿನ ಮಾಲೀಕನಾದ ಅಬ್ದುಲ್ಲಾನ ಬಳಿಯಲ್ಲಿದ್ದು, ಸ್ವದೇಶಕ್ಕೆ ಹಿಂದಿರುಗಲು ಮೂಲ ಪಾಸ್ಪೋರ್ಟ್ ಗಳನ್ನು ಕೇಳಿದರೂ ಮಾಲೀಕ ನೀಡದೇ ಇದ್ದು, ಇದರಿಂದ ಆಪಾದಿತರಿಗೆ ಸ್ವದೇಶಕ್ಕೆ ಬರಲು ಬೇರೆ ದಾರಿ ಕಾಣದೇ ಈ ರೀತಿ ಅನಧಿಕೃತವಾಗಿ ಯಾವುದೆ ಮೂಲ ಪಾಸ್ಪೋರ್ಟ್ ಹಾಗೂ ಪರವಾನಿಗೆ ಹೊಂದದೇ ಭಾರತೀಯ ಜಲಸೀಮೆಯೊಳಗೆ ಪ್ರವೇಶ ಮಾಡಿರುವುದು ತನಿಖೆಯಿಂದ ಧೃಡಪಟ್ಟಿರುತ್ತದೆ.

ಮಲ್ಪೆ ಕರಾವಳಿ ಕಾವಲು ಪೊಲೀಸ್ ಅಧೀಕ್ಷಕರು ಹಾಗೂ ಇತರ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿ.ಎಸ್.ಪಿ ಮಲ್ಪೆ ಪಿಎಸ್ಐ ಶಿವಶಂಕರ್ ತನಿಖೆ ನಡೆಸಿ, ಸುಮಾರು 33 ಸಾಕ್ಷಿದಾರರ ವಿಚಾರಣೆ ನಡೆಸಿ ಆಪಾದಿತರಾದ ಜೇಮ್ಸ್ ಫ್ರಾಂಕ್ಲಿನ್, ರಾಬಿನ್ಸ್ಟನ್ ಹಾಗೂ ಟಿರೋಸ್ @ ಡಿರೋಸ್ ರವರು ಅಕ್ರಮ ಪ್ರವೇಶ ತನಿಖೆಯಲ್ಲಿ ಧೃಡಪಟ್ಟಿದ್ದರಿಂದ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿರುತ್ತಾರೆ.
ಸದ್ರಿ ಪ್ರಕರಣವು ಮಾನ್ಯ ಪ್ರಿನ್ಸಿಪಲ್ (ಸೀನಿಯರ್) ಸಿವಿಲ್ ಜಡ್ಜ್ ಮತ್ತು ಸಿ.ಜೆ.ಎಮ್ ನ್ಯಾಯಾಲಯದಲ್ಲಿ ವಿಚಾರಣೆಯಾಗಿ 3 ಜನ ಆಪಾದಿರತರುಗಳು ಅಕ್ರಮವಾಗಿ ಭಾರತೀಯ ಜಲಸೀಮೆಯೊಳಗೆ ಪ್ರವೇಶಿಸಿದ್ದು ಸಾಭೀತಾಗಿದ್ದರಿಂದ ಆಪಾದಿತ 1 ಮತ್ತು 2ನೇ ಯವರಿಗೆ ತಲಾ ರೂ. 10,000 ರೂ. ಹಾಗೂ 3 ನೇ ಆಪಾದಿತನಿಗೆ 60,000 ರೂ ಸೇರಿದಂತೆ ಒಟ್ಟು 80,000 ರೂ. ದಂಢ ವಿಧಿಸಲಾಗಿರುತ್ತದೆ ಎಂದು ಕರಾವಳಿ ಕಾವಲು ಪೊಲೀಸ್ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.