LATEST NEWS
ಬಿರುಕು ಬಿಟ್ಟ ರೈಲ್ವೆ ಟ್ರ್ಯಾಕ್ – ಅರ್ಧ ಕಿಲೋ ಮೀಟರ್ ಓಡಿ ಹೋಗಿ ರಾಜಧಾನಿ ರೈಲು ನಿಲ್ಲಿಸಿದ ಟ್ರ್ಯಾಕ್ಮ್ಯಾನ್ ಮಹಾದೇವ
ಕಾರವಾರ, ಸೆಪ್ಟೆಂಬರ್ 07: ಅರ್ಧ ಕಿಲೋ ಮೀಟರ್ ಓಡಿ ಹೋಗಿ ರಾಜಧಾನಿ ಎಕ್ಸ್ ಪ್ರೇಸ್ ರೈಲನ್ನು ನಿಲ್ಲಿಸುವ ಮೂಲಕ ನೂರಾರು ಜನರ ಪ್ರಾಣ ಉಳಿಸಿ ರೈಲ್ವೆ ಟ್ರ್ಯಾಕ್ಮ್ಯಾನ್ ರಿಯಲ್ ಹಿರೋ ಆಗಿದ್ದಾರೆ. ಟ್ರ್ಯಾಕ್ಮ್ಯಾನ್ ಮಹಾದೇವ ಅವರ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಭಾರಿ ರೈಲು ದುರಂತ ತಪ್ಪಿದೆ.
ಕೊಂಕಣ ರೈಲ್ವೆಯ ಕುಮಟಾ-ಹೊನ್ನಾವರ ನಡುವೆ ಹಳಿಗಳ ಜೋಡಣೆಯ ವೆಲ್ಡಿಂಗ್ ಬಿಟ್ಟಿತ್ತು. ಇದನ್ನು ಬುಧವಾರ ನಸುಕಿನ 4.50ರ ಸಮಯದಲ್ಲಿ ಟ್ರ್ಯಾಕ್ಮ್ಯಾನ್ ಮಹದೇವ ಅವರು ಗಮನಿಸಿದ್ದಾರೆ. ಕೂಡಲೇ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ತಿರುವನಂತಪುರ-ದಿಲ್ಲಿ ರಾಜಧಾನಿ ಎಕ್ಸ್ಪ್ರೆಸ್ ರೈಲನ್ನು ನಿಲ್ಲಿಸಲು ಕೂಡಲೇ ಕುಮಟಾ ನಿಲ್ದಾಣಕ್ಕೆ ಕರೆ ಮಾಡಿದ್ದಾರೆ. ಆದರೆ, ಅಷ್ಟರಲ್ಲಿ ರೈಲು ನಿಲ್ದಾಣದಿಂದ ಹೊರಟಿತ್ತು. ನಂತರ ಮಹಾದೇವ ರಾಜಧಾನಿ ರೈಲಿನ ಲೋಕೊ ಪೈಲಟ್ಗೆ ಕರೆ ಮಾಡಿದರು. ಆದರೆ ಸಂಪರ್ಕ ಸಾಧ್ಯವಾಗಲಿಲ್ಲ. 8 ನಿಮಿಷದಲ್ಲಿ ರೈಲು ವೆಲ್ಡಿಂಗ್ ಬಿಟ್ಟಿದ್ದ ಸ್ಥಳಕ್ಕೆ ಬರುವುದರಲ್ಲಿತ್ತು. ತಡ ಮಾಡದ ಮಹಾದೇವ, ಹಳಿ ಮೇಲೆ ಓಡಿ ಐದು ನಿಮಿಷದಲ್ಲಿ ಅರ್ಧ ಕಿ.ಮೀ. ಕ್ರಮಿಸಿ ರೈಲಿಗೆ ನಿಲ್ಲುವಂತೆ ಸೂಚನೆ ನೀಡಿದರು. ಇದರಿಂದ ಸಂಭಾವ್ಯ ಅಪಾಯ ತಪ್ಪಿತು. ಸಿಬ್ಬಂದಿ ಹಳಿ ಜೋಡಣೆ ಬಿಟ್ಟಿದ್ದ ಸ್ಥಳದಲ್ಲಿ ವೆಲ್ಡಿಂಗ್ ಮಾಡಿದ ನಂತರ ರೈಲು ಕಾರವಾರದ ಕಡೆಗೆ ಪ್ರಯಾಣ ಬೆಳೆಸಿತು.
ಮಹಾದೇವ ಅವರ ಸಮಯಪ್ರಜ್ಞೆಗೆ ರೈಲ್ವೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಂಕಣ ರೈಲ್ವೆ ಸಿಎಂಡಿ ಸಂತೋಷ ಕುಮಾರ ಝಾ ಅವರು ಮಹಾದೇವ ನಾಯ್ಕ ಅವರಿಗೆ 15 ಸಾವಿರ ರೂ. ನಗದು ಬಹುಮಾನ ಘೋಷಿಸಿದ್ದಾರೆ. ಕೊಂಕಣ ರೈಲ್ವೆ ಸೀನಿಯರ್ ಎಂಜಿನಿಯರ್ ಬಿ.ಎಸ್.ನಾಡಗೆ ಮುರುಡೇಶ್ವರ ಸಮೀಪ ರೈಲ್ವೆ ಹಳಿ ಮೇಲೆಯೇ ಮಹಾದೇವ ನಾಯ್ಕ ಅವರನ್ನು ಸನ್ಮಾನಿಸಿ ಬಹುಮಾನ ನೀಡಿದರು.
You must be logged in to post a comment Login