Connect with us

    LATEST NEWS

    ಸುಂಟರಗಾಳಿಗೆ ನಲುಗಿದ ಉಡುಪಿ, ನೂರಾರು ಮನೆ, ತೋಟಗಳು ಧರೆಗೆ, ಲಕ್ಷಾಂತರ ರೂಪಾಯಿ ನಷ್ಟ..!

    ಉಡುಪಿ: ಉಡುಪಿ ಜಿಲ್ಲೆಯಲ್ಲಿ ಬೀಸಿದ ಸುಂಟರಗಾಳಿಗೆ ಜಿಲ್ಲೆಯ ಅನೇಕ ಭಾಗಗಳು ಅಕ್ಷರಶ ನಲುಗಿ ಹೋಗಿದ್ದು ಅಪಾರ ಪ್ರಮಾಣದಲ್ಲಿ ಆಸ್ತಿ ಪಾಸ್ತಿ ನಷ್ಟ ಸಂಭವಸಿದೆ.

    ಸುಂಟರ ಗಾಳಿಯ ಅಬ್ಬರಕ್ಕೆ ಹಲವು ಮನೆ, ಅಡಿಕೆ, ರಬ್ಬರ್ ಸಹಿತ ನೂರಾರು ಎಕ್ರೆ ಬೆಳೆ ನಾಶವಾಗಿದೆ. ಮುಂಜಾನೆ ಭಾರೀ ಮಳೆಯೊಂದಿಗೆ ಬೀಸಿದ ಬಿರುಗಾಳಿಗೆ ಕುಂದಾಪುರ ತಾಲೂಕಿನ ಅಮಾಸೆಬೈಲಿನ ರಟ್ಟಾಡಿ ಗ್ರಾಮದ ಬಾಲಕೃಷ್ಣ ನಡಬೂರು ಇವರ 50 ಅಡಿಕೆ ಮರ ಹಾನಿಗೊಂಡಿದ್ದರೆ, ರಾಜೀವ ನಡಬೂರು ಇವರ 100ಕ್ಕೂ ಅಧಿಕ ಅಡಿಕೆ ಮರ ತುಂಡಾಗಿ ನೆಲಕ್ಕುರುಳಿದೆ. ಮಹೇಶ ನಡಬೂರು ಇವರ ಮನೆಯ ಮಾಡಿನ 30ಕ್ಕೂ ಅಧಿಕ ಹೆಂಚುಗಳು ಗಾಳಿಗೆ ಹಾರಿಹೋಗಿದ್ದರೆ ಮಾಡಿನ ದೊಂಬೆ ಹಾನಿಗೊಂಡಿದೆ.

    ಯಲ್ಲ ನಡಬೂರು ಇವರ 50 ಅಡಿಕೆ ಮರ, ಅಮಾಸೆಬೈಲು ಗ್ರಾಮದ ಕುರುಬಲಮಕ್ಕಿಯ ದ್ಯಾವ ಪೂಜಾರಿ ಇವರ 70 ಅಡಿಕೆ ಮರ ಹಾಗೂ ಎರಡು ತೆಂಗಿನನ ಮರ ತುಂಡಾಗಿ ನೆಲಕ್ಕೆ ಉರುಳಿದೆ.ಅಮಾಸೆಬೈಲು ಜಡ್ಕಿನಗದ್ದೆ ಬಸವ ಪೂಜಾರಿ ಇವರ 60 ಅಡಿಕೆ ಮರ, ಎರಡು ತೆಂಗಿನ ಮರಗಳು ಹಾಗೂ ಅಮಾಸೆ ಬೈಲು ಹೆದ್ದಾರಿಗದ್ದೆಯ ತೇಜ ಕುಲಾಲರ 40ಕ್ಕೂ ಅಧಿಕ ಅಡಿಕೆ ಮರಗಳಿಗೆ ಸಂಪೂರ್ಣ ಹಾನಿಯಾಗಿದೆ. ರಟ್ಟಾಡಿ ಗ್ರಾಮದ ಮಹಾಬಲ ಕಾನ್‌ಬೈಲು ಇವರ ಮನೆಯ ಮಾಡಿನ ತಗಡು ಹಾಗೂ ಸಿಮೆಂಟ್ ಶೀಟುಗಳು ಹಾರಿಹೋಗಿವೆ.ರಟ್ಟಾಡಿಯ ನರಸಿಂಹ ನಡಬೂರು ಇವರ ನಿರ್ಮಾಣ ಹಂತದ ದನದ ಕೊಟ್ಟಿಗೆ ಮೇಲ್ಚಾವಣಿಯ ಹೆಂಚು ಹಾಗೂ ಶೀಟುಗಳು ಹಾರಿಹೋಗಿವೆ.

    ಹುಂತ್ರಿಕೆಯ ವಸಂತ ಶೆಟ್ಟಿ ಅವರ 70 ಅಡಿಕೆ ಮರ, ಕತ್ಕೋಡು ನಾಗರಾಜ ಪ.ಜಾತಿ ಇವರ ಮನೆಯ ಮೇಲೆ ತೆಂಗಿನ ಮರ ಹಾಗೂ ಸಾಗುವಾನಿ ಮರ ಬಿದ್ದು ಮನೆ ಸಂಪೂರ್ಣ ದ್ವಂಸಗೊಂಡಿದೆ.ಮನೆ-ಕೊಟ್ಟಿಗೆಗೆ ಹಾನಿ: ರಟ್ಟಾಡಿ ತೆಂಕಮಕ್ಕಿಯ ಗೋವಿಂದ ಪೂಜಾರಿ ಅವರ 140 ಅಡಿಕೆ ಮರ, ಮನೆ ಹಾಗೂ ದನದ ಕೊಟ್ಟಿಗೆಗೆ ಹಾನಿಯಾಗಿದೆ. ಮಾಡಿನ ಹೆಂಚು ಗಾಳಿಗೆ ಹಾರಿಹೋಗಿವೆ. ರೇಖಾನಾಥ ರೈ ಅವರು 400 ಅಡಿಕೆ ಮರಗಳು, ತೆಂಕೂರು ಗಣೇಶ ಶೆಟ್ಟಿ ಇವರ 200 ಅಡಿಕೆ ಮರ ಹಾಗೂ ಪಂಪುಸೆಟ್ ಶೆಡ್‌ಗೆ ಹಾನಿಯಾಗಿದೆ. ರಾಕೇಶ್ ಶೆಟ್ಟಿ ಇವರ 150 ಅಡಿಕೆ ಮರ ಧರಾಶಾಹಿಯಾಗಿವೆ.ಸಂಪೂರ್ಣ ತೋಟ ಹಾನಿ: ಹೊರ್ಲಿಜೆಡ್ಡಿನ ಬಾಲಕೃಷ್ಣ ಶೆಟ್ಟಿ ಇವರ 1000 ಅಡಿಕೆ ಮರ, 15 ತೆಂಗಿನ ಮರ, 5 ಹಲಸಿನ ಮರ, 8ಮಾವಿನ ಮರ, 50ಗೇರುಮರ ಹಾಗೂ 50 ರಬ್ಬರ್ ಮರ ಸೇರಿ ತೋಟಕ್ಕೆ ಸಂಪೂರ್ಣ ಹಾನಿಯಾಗಿದೆ. ತೆಂಕೂರು ಮಹೇಶ್ಚಂದ್ರ ಶೆಟ್ಟಿ ಇವರ 250 ಅಡಿಕೆ ಮರ, 25 ತೆಂಗಿನ ಮರ, ಪಂಪುಸೆಟ್ ಶೆಡ್ ಹಾನಿಯಾಗಿದ್ದರೆ, ಚಂದ್ರಶೇಖರ ಶೆಟ್ಟಿ ಇವರ 250 ಅಡಿಕೆ ಮರ ಹಾಗೂ ವಾಸದ ಮನೆಗೆ ಭಾಗಶ: ಹಾನಿಯಾಗಿದೆ.


    ಗಾಳಿ-ಮಳೆಯಿಂದ ಬ್ರಹ್ಮಾವರ ತಾಲೂಕಿನ ಹೊಸೂರು ಗ್ರಾಮದಲ್ಲಿ ವ್ಯಾಪಕ ಹಾನಿ ಸಂಭವಿಸಿದೆ. ಇಲ್ಲಿನ 12ಕ್ಕೂ ಅಧಿಕ ಮನೆಗಳು ಇದರಿಂದ ಭಾರೀ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಜಗದೀಶ್ ಎಂಬವರ ಮನೆ ಮೇಲೆ ಮರ ಬಿದ್ದು ಒಂದು ಲಕ್ಷ ರೂ., ದಯಾನಂದ ನಾಯಕ್ ಇವರ ಮನೆಯ ಮೇಲ್ಚಾವಣಿಗೆ ಭಾಗಶ: ಹಾನಿಯಾಗಿ ಒಂದೂವರೆ ಲಕ್ಷ, ಅದೇ ರೀತಿ ಸದಾನಂದ ನಾಯಕ್, ರಾಘವೇಂದ್ರ ಹಾಗೂ ಪರಮೇಶ್ವರ ಇವರ ಮನೆಯ ಮೇಲ್ಚಾವಣಿಗೆ ತಲಾ ಒಂದೂವರೆ ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ.ಉಳಿದಂತೆ ಸುರೇಶ್ ಸಾವಂತ್, ಸಂತೋಷ್ ಸಾವಂತ್, ಗೋವಿಂದ ಸೇರ್ವೆಗಾರ್, ಕೇಶವ, ಸೀತಾರಾಮ ಸೇರ್ವೆಗಾರ, ರವಿ ಸೇರ್ವೆಗಾರ, ಶ್ರೀನಿವಾಸ ಸೇರ್ವೆಗಾರ, ಶ್ರೀನಿವಾಸ, ಸೋಮಯ್ಯ ಅಲ್ಲದೇ ಯಡ್ತಾಡಿ ಗ್ರಾಮದ ಚಂದ್ರಶೇಖರ್ ಇವರ ಮನೆಗಳಿಗೆ 40,000 ರೂ.ಗಳಿಂದ ಒಂದು ಲಕ್ಷ ರೂ.ವರೆಗೆ ಹಾನಿ ಸಂಭವಿಸಿದೆ.
    ಕಾರ್ಕಳ ತಾಲೂಕು ಇನ್ನಾ ಗ್ರಾಮದ ಸುರೇಶ್ ಮೂಲ್ಯ ಇವರ ಮನೆ ಮೇಲೆ ಮರ ಬಿದ್ದು, ಉಡುಪಿ ತಾಲೂಕು ಕಡೆಕಾರು ಗ್ರಾಮದ ಸರಸು ಸುವರ್ಣ, ವಿದ್ಯಾವತಿ, ದಿವಾಕರ ಶೆಟ್ಟಿ, ಶಿವಳ್ಳಿ ಗ್ರಾಮದ ಸುಮಿತ್ರ, ಮುತ್ತಯ್ಯ, ಪುತ್ತೂರು ಗ್ರಾಮದ ದೇವೇಂದ್ರನಾಯಕ್ ಇವರ ಮನೆಗಳಿಗೂ ಹಾನಿಯಾದ ವರದಿ ಬಂದಿದೆ.
    ಕುಂದಾಪುರ ತಾಲೂಕಿನ ಕಟ್‌ಬೆಲ್ತೂರು ಗ್ರಾಮದ ಸುಮಂತ್, ಬೀಜಾಡಿಯ ರಾಮಚಂದ್ರ ಸೇರಿಗಾರ್, ಕುಂಭಾಶಿಯ ಚಂದ್ರಶೇಖರ ಆಚಾರ್ಯ, ಕೊರ್ಗಿಯ ಚಿಕ್ಕು, ಕುಳಂಜೆಯ ಸುಬ್ಬಣ್ಣ ನಾಯ್ಕ್, ಕೆದೂರಿನ ರತ್ನ ಮೊಗೇರ್ತಿ ಇವರ ಮನೆ ಗಳಿಗೂ ವಿವಿಧ ಪ್ರಮಾಣಗಳಲ್ಲಿ ಹಾನಿಯಾಗಿದ್ದು ಲಕ್ಷಾಂತರ ರೂ.ನಷ್ಟದ ಅಂದಾಜು ಮಾಡಲಾಗಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply