LATEST NEWS
ದಕ್ಷಿಣಕನ್ನಡ ಜಿಲ್ಲೆಯಲ್ಲೂ ಹೊಟೇಲ್ ತಿಂಡಿ ಬೆಲೆ ಶೇ.10ರಷ್ಟು ಏರಿಕೆಗೆ ನಿರ್ಧಾರ

ಮಂಗಳೂರು ಅಗಸ್ಟ್ 02 : ದಿನಬಳಕೆ ವಸ್ತುಗಳ ಬೆಲೆ ಏರಿಕೆ ಹಾಗೂ ಹಾಲಿನ ಬೆಲೆ ಏರಿಕೆ ಹಿನ್ನಲೆ ರಾಜ್ಯದ ಇತರ ಜಿಲ್ಲೆಗಳಲ್ಲೂ ಹೊಟೇಲ್ ಮಾಲೀಕರು ತಿಂಡಿಗಳ ಬೆಲೆ ಏರಿಕೆಗೆ ಮುಂದಾಗಿದ್ದು, ಇದೀಗ ದಕ್ಷಿಣಕನ್ನಡ ಜಿಲ್ಲೆಯಲ್ಲೂ ಆಗಸ್ಟ್ 1 ರಿ೦ದ ಹೊಟೇಲ್ಗಳಲ್ಲಿ ತಿಂಡಿ ತಿನಿಸುಗಳ ಬೆಲೆ ಶೇ.10ರಷ್ಟು ಹೆಚ್ಚಳ ಮಾಡಲು ಹೊಟೇಲ್ ಮಾಲೀಕರ ಸಂಘದ ದ.ಕ.ಜಿಲ್ಲಾ ಘಟಕ ತೀರ್ಮಾನಿಸಿದೆ.
ಆದರೆ ಬೆಲೆ ಏರಿಕೆಯ ನಿರ್ಧಾರವನ್ನು ಆಯಾ ಹೊಟೇಲ್ಗಳ ನಿಶ್ಚಯಕ್ಕೆ ಬಿಡಲಾಗಿದೆ. ಈ ವರ್ಷ ಎರಡು ಬಾರಿ ಹಾಲಿನ ದರ ಏರಿಕೆಯಾಗಿದ್ದು, ಲೀಟರ್ಗೆ 6 ರು. ಹೆಚ್ಚಳವಾಗಿದೆ. ಇದಲ್ಲದೆ ತರಕಾರಿ, ಬೇಳೆ ಕಾಳು, ಕಚ್ಚಾವಸ್ತುಗಳ ಬೆಲೆ ಗಗನಕ್ಕೇರಿದೆ. ಇಂಧನ, ಸಿಲಿಂಡರ್ ದರವೂ ಏರಿಳಿತದಲ್ಲಿದೆ. ಹೊಟೇಲ್ ಮಾಲೀಕರಿಗೆ ಇದರಿಂದ ಹೊರೆಯಾಗುತ್ತಿದೆ. ಆದರೂ ಕಳೆದ ಒಂದು ವರ್ಷದಿಂದ ತಿಂಡಿ ತಿನಿಸುಗಳ ದರ ಏರಿಕೆ ಮಾಡಿರಲಿಲ್ಲ, ಈಗ ಅನಿವಾರ್ಯವಾಗಿ ದರ ಏರಿಕೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಸಂಘದ ಅಧ್ಯಕ್ಷ ಜಗದೀಶ್ ಶೆಣೈ ಪ್ರತಿಕ್ರಿಯಿಸಿದ್ದಾರೆ. ಹೋಟೆಲ್ ಕೆಲಸಗಾರರಿಗೆ ತುಟ್ಟಿಭತ್ಯೆ ಸೇರಿದಂತೆ 4,000 ರು.ಗಳಷ್ಟು ಸಂಬಳ ಹೆಚ್ಚಳ ಮಾಡಲಾಗಿದೆ. ಹೀಗಾಗಿ ಎಲ್ಲ ಹೊಟೇಲ್ ಗಳಲ್ಲೂ ತಿಂಡಿ ತಿನಿಸುಗಳ ದರ ಏರಿಕೆಗೆ ನಿರ್ಧರಿಸಲಾಗಿದೆ. ಆದರೂ ಬೆಲೆ ಏರಿಕೆಯ ನಿರ್ಧಾರವನ್ನು ಆಯಾ ಹೊಟೇಲ್ಗಳ ತೀರ್ಮಾನಕ್ಕೆ ಬಿಡಲಾಗಿದೆ ಎಂದಿದ್ದಾರೆ.
