KARNATAKA
ಹೊಸಪೇಟೆ – ಭೀಕರ ರಸ್ತೆ ಅಪಘಾತಕ್ಕೆ 7 ಮಂದಿ ಬಲಿ
ವಿಜಯನಗರ ಅಕ್ಟೋಬರ್ 09: ಟಿಪ್ಪರ್ ಹಾಗೂ ಕ್ರೂಸರ್ ವಾಹನಗಳ ನಡುವೆ ನಡೆದ ಭೀಕರ ರಸ್ತೆ ಅಪಘಾತಕ್ಕೆ 7 ಮಂದಿ ಸಾವನಪ್ಪಿದ ಘಟನೆ ಇಲ್ಲಿನ ಹೊಸಪೇಟೆ ಬಳಿ ನಡೆದಿದೆ. ಸಾವನಪ್ಪಿದವರನ್ನು ಹೊಸಪೇಟೆ ನಿವಾಸಿಗಳಾದ ಉಮಾ (45), ಕೆಂಚವ್ವ (60) ಭಾಗ್ಯ (32), ಅನಿಲ (30), ಗೋಣಿ ಬಸಪ್ಪ (65), ಭೀಮಲಿಂಗಪ್ಪ (49), ಬಾಲಕ ಯುವರಾಜ (4) ಎಂದು ಗುರುತಿಸಲಾಗಿದೆ.
ಹರಪನಹಳ್ಳಿ ತಾಲೂಕಿನ ಕೂಲಹಳ್ಳಿ ಗೋಣಿಬಸವೇಶ್ವರ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ಈ ದುರ್ಘಟನೆ ಸಂಭವಿಸಿದೆ. ಇವರು ದೇವಾಲಯಕ್ಕೆ ಹೋಗಿ ಕ್ರೂಸರ್ನಲ್ಲಿ ವಾಪಸ್ ಆಗುತ್ತಿದ್ದರು. ಈ ವೇಳೆ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಎಕ್ಸಲ್ ಕಟ್ ಆಗಿ ಎರಡೂ ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಭೀಕರ ರಸ್ತೆ ಅಪಘಾತಕ್ಕೆ ಕ್ರೂಸರ್ನಲ್ಲಿದ್ದವರಲ್ಲಿ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗಾಯಾಳುಗಳನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ. ಮೂವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ. ಅಪಘಾತದ ತೀವ್ರತೆಗೆ ಕ್ರೂಸರ್ ಅಪ್ಪಚ್ಚಿಯಾಗಿತ್ತು. ಅದರಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲು ಪೊಲೀಸರು ಹಾಗೂ ಸ್ಥಳೀಯರು ಹರಸಾಹಸಪಟ್ಟರು.
You must be logged in to post a comment Login