KARNATAKA
ಹಾಸನ – ಹೃದಯಾಘಾತಕ್ಕೆ ಬಲಿಯಾದ ಪದವಿ ವಿಧ್ಯಾರ್ಥಿನಿ

ಹಾಸನ ಮೇ 29: ಇತ್ತೀಚೆಗೆ ಹೃದಯಾಘಾತದಿಂದ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದೀಗ ಹಾಸನದಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಕೆಲವತ್ತಿ ಗ್ರಾಮದಲ್ಲಿ ನಡೆದಿದೆ.
ಕೆಲವತ್ತಿ ಗ್ರಾಮದ ಪಾಪಣ್ಣ ಹಾಗೂ ಗಾಯತ್ರಿ ದಂಪತಿ ಪುತ್ರಿ ಕವನ ಕೆ.ವಿ (21) ಮೃತ ವಿದ್ಯಾರ್ಥಿನಿ. ಕವನ ಹಾಸನ ನಗರದ ಎಂ.ಜಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಳು. ಮೂರು ವಿಷಯಗಳ ಪರೀಕ್ಷೆ ಬರೆದಿದ್ದ ಕವನ ಇನ್ನೂ ಮೂರು ಪರೀಕ್ಷೆಗಳನ್ನು ಬರೆಯಬೇಕಿತ್ತು. ಸಂಜೆ ಮನೆಗೆ ನೀರು ತಂದ ಕವನಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದೆ. ಈ ವೇಳೆ ಕವನ ತಾಯಿ ಬಳಿ ಕುಡಿಯಲು ನೀರು ಕೇಳಿದ್ದಾಳೆ. ತಾಯಿ ನೀರು ತಂದು ಕೊಡುವಷ್ಟರಲ್ಲಿ ಕವನ ಮನೆಯಲ್ಲಿಯೇ ಕುಸಿದು ಬಿದ್ದಿದ್ದಳು.

ಕೂಡಲೇ ಪೋಷಕರು ಆಕೆಯನ್ನು ಹಾಸನದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಅಷ್ಟರಲ್ಲಾಗಲೇ ಕವನ ಕೊನೆಯುಸಿರೆಳೆದಿದ್ದಳು. ಸದ್ಯ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಸಹಪಾಠಿಗಳು ಹಾಗೂ ಕಾಲೇಜು ಉಪನ್ಯಾಸಕ ವರ್ಗದಲ್ಲಿಯೂ ಶೋಕ ಮಡುಗಟ್ಟಿದೆ.