Connect with us

    LATEST NEWS

    ಗೃಹಲಕ್ಷ್ಮಿ ಕಂಡೀಶನ್ ನಿಂದ ಜನಸಾಮಾನ್ಯರು ಬೀದಿಗೆ: ಶಾಸಕ ಕಾಮತ್

    ಮಂಗಳೂರು ಅಗಸ್ಟ್ 5: ರಾಜ್ಯ ಸರಕಾರದ ಗ್ಯಾರಂಟಿ ಭಾಗ್ಯಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಜನಸಾಮಾನ್ಯರಿಗೆ ಕಬ್ಬಿಣದ ಕಡಲೆಯಂತಾಗಿದೆ. ಚುನಾವಣೆ ಸಂದರ್ಭ ಯಾವುದೇ ಕಂಡೀಶನ್ ಹಾಕದೆ ಕುಟುಂಬದ ಮಹಿಳೆಯ ಖಾತೆಗೆ 2 ಸಾವಿರ ನೀಡುವ ಘೋಷಣೆ ಮಾಡಿದ್ದು, ಇದೀಗ ಅಧಿಕೃತವಾಗಿ ಜಾರಿಗೆ ಬರುವಾಗ ಹಲವು ಕಂಡೀಶನ್ ಗಳನ್ನು ಹಾಕಿ ಸತಾಯಿಸುತ್ತಿರುವುದು ಸರಕಾರಕ್ಕೆ ಸಾಮಾನ್ಯ ಜನರ ಮೇಲಿರುವ ಕಾಳಜಿಯನ್ನು ತೋರಿಸುತ್ತದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

    ಹಳೆ ರೇಷನ್ ಕಾರ್ಡ್ ಗಳಲ್ಲಿ ಮನೆಯ ಯಜಮಾನನ ಹೆಸರೇ ನಮೂದಾಗಿರುತ್ತದೆ. ಆದರೆ ಈಗ ಗೃಹಲಕ್ಷ್ಮಿಯ ಕಂಡೀಶನ್ ನಲ್ಲಿ ಮನೆಯ ಯಜಮಾನಿಯ ಹೆಸರೇ ಇರಬೇಕು ಎಂಬ ನಿಯಮ ಹಾಕಲಾಗಿದೆ. ಇದು ಅನೇಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಜನರಿಗೆ ತೊಂದರೆ ಕೊಟ್ಟು ಯೋಜನೆ ಕೊಡುವ ಉದ್ದೇಶ ಏನು ಎಂದು ಅವರು ಪ್ರಶ್ನಿಸಿದ್ದಾರೆ.

     

    ಯೋಜನೆಯ ಫಲಾನುಭವಿಗಳಾಗಲು ಹೊಸದಾಗಿ ರೇಶನ್ ಕಾರ್ಡ್ ತಿದ್ದುಪಡಿ ಮಾಡಿಸಿ ಅರ್ಜಿ ಸಲ್ಲಿಸಬೇಕಾದ ಅನಿವಾರ್ಯತೆ ಇದ್ದು, ಇದಕ್ಕಾಗಿ ಜನಸಾಮಾನ್ಯರು ಅನಗತ್ಯ ಕಚೇರಿಗಳಿಗೆ ಅಲೆದಾಡುವಂತೆ ಆಗಿದೆ. ಈ ನಡುವೆ ಸರ್ವರ್, ಒಟಿಪಿ ಸಮಸ್ಯೆಗಳಿಂದಾಗಿ ಜನರಿಗೆ ತಕ್ಷಣಕ್ಕೆ ಈ ಕೆಲಸ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಇನ್ನು ಕಾರ್ಡ್ ನಲ್ಲಿ ಯಜಮಾನನ ಬದಲು ಯಜಮಾನಿಯ ಹೆಸರು ಹಾಕಿದರೂ ತಕ್ಷಣಕ್ಕೆ ಗೃಹಲಕ್ಷ್ಮಿ ಯೋಜನೆಯನ್ನು ಮಾಡಲು ಆಗದ ಪರಿಸ್ಥಿತಿ ಇದೆ. ಚುನಾವಣೆ ರಾಜಕೀಯ ಕಾರಣಕ್ಕೋಸ್ಕರ ಗ್ಯಾರಂಟಿ ಘೋಷಿಸಿ ಈಗ ಹಲವು ಕಂಡೀಶನ್ ಗಳನ್ನು ಹಾಕಿ ಜನರನ್ನು ಬೀದಿಗೆ ಬರುವಂತೆ ಮಾಡಿರುವುದು ಕಾಂಗ್ರೆಸ್ ನ ಆಡಳಿತ ವೈಖರಿಯನ್ನು ತೋರಿಸುತ್ತದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply