KARNATAKA
ರೀಲ್ಸ್ ಮಾಡಲು ಹೋಗಿ 14ನೇ ಮಹಡಿಯಿಂದ ಬಿದ್ದು ಸಾವನಪ್ಪಿದ ಯುವತಿ

ಬೆಂಗಳೂರು ಜೂನ್ 25: ತಾನು ಬೇಜಾರಿನಲ್ಲಿದ್ದು, ಅದಕ್ಕೆ ರೀಲ್ಸ್ ಮಾಡಬೇಕೆಂದು ಯುವತಿಯೊಬ್ಬಳು 14ನೇ ಮಹಡಿಯಿಂದ ಆಯತಪ್ಪಿ ಜಾರಿ ಬಿದ್ದು ಸಾವನಪ್ಪಿದ ಘಟನೆ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.
ಮೃತರನ್ನು ಆಂಧ್ರದ ಬೋಯಲ ನಂದಿನಿ (21) ಎಂದು ಗುರುತಿಸಲಾಗಿದೆ. ಚಿತ್ತೂರು ಮೂಲದ ನಂದಿನಿ ಬಿ.ಕಾಂ ಪದವೀಧರೆಯಾಗಿದ್ದು, ನಗರದ ಭುವನೇಶ್ವರಿ ಲೇಔಟ್ನ ಪಿಜಿಯೊಂದರಲ್ಲಿ ವಾಸಿಸುತ್ತಿದ್ದಳು. ರಿಲಯನ್ಸ್ ಮಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದಳು.

ಸ್ನೇಹಿತರೆಲ್ಲಾ ಸೇರಿ ನಿರ್ಮಾಣ ಹಂತದ ಕಟ್ಟಡದ ಬಳಿ ಪಾರ್ಟಿ ಮಾಡಲೆಂದು ಯುವತಿ ನಂದಿನಿ ಹೋಗಿದ್ದಳು. ಈ ಪಾರ್ಟಿಯಲ್ಲಿ ಪ್ರೀತಿ ವಿಚಾರಕ್ಕಾಗಿ ಮಾತುಕತೆ ನಡೆದು ಗಲಾಟೆ ಆಗಿದೆ. 12 ವರ್ಷದ ಲವ್ ಮುರಿದು ಬಿದ್ದಿತ್ತು. ಇದರಿಂದ ಬೇಸರಗೊಂಡಿದ್ದ ಯುವತಿ ಸ್ಯಾಡ್ ರೀಲ್ಸ್ ಮಾಡಲು ಹೋಗಿದ್ದಳು. ಈ ವೇಳೆ ನಂದಿನಿ ಮದ್ಯ ಸೇವನೆ ಮಾಡಿದ್ದಳು ಎಂದು ಹೇಳಲಾಗಿದ್ದು. ರೀಲ್ಸ್ ಮಾಡುವಾಗ ತಾನು ಎಲ್ಲಿ ಇದ್ದೇನೆ ಎನ್ನುವುದು ಮರೆತ್ತಿದ್ದ ನಂದಿನಿ ಕಟ್ಟಡದ ಮೇಲಿನಿಂದ ಕೆಳಗೆ ಬಿದ್ದಿದ್ದಾಳೆ.
ಪುತ್ರಿಯ ಸಾವಿನ ವಿಚಾರ ತಿಳಿದ ನಂದಿನಿ ಪೋಷಕರು ಬೆಂಗಳೂರಿಗೆ ಬಂದಿದ್ದು, ಮಗಳು ನಂದಿನಿ ಜತೆಗಿದ್ದ ಇಬ್ಬರು ಯುವಕರು ಹಾಗೂ ಸ್ನೇಹಿತೆಯನ್ನು ವಿಚಾರಣೆ ನಡೆಸುವಂತೆ ದೂರಿನಲ್ಲಿ ಕೋರಿದ್ದಾರೆ. ಈ ನಿಟ್ಟಿನಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮೃತ ನಂದಿನಿ ಜತೆಗಿದ್ದ ಯುವತಿ ಹಾಗೂ ಯುವಕರನ್ನು ಪ್ರಾಥಮಿಕ ವಿಚಾರಣೆ ನಡೆಸಲಾಗಿದೆ.