LATEST NEWS
ಗೆಜ್ಜೆಗಿರಿ ಕ್ಷೇತ್ರದ ಮಡಿಲ ಸೇವೆಗೆ ಹಳೆಯ ಸೀರೆ ನೀಡಿದ್ದ ಬಟ್ಟೆ ಅಂಗಡಿ ಮುಂದೆ ಸೀರೆ ಎಸೆದು ಆಕ್ರೋಶ

ಮಂಗಳೂರು ಮಾರ್ಚ್ 13: ಗೆಜ್ಜೆಗಿರಿ ಕ್ಷೇತ್ರದಲ್ಲಿ ನಡೆಯುವ ವರ್ಷಾವಧಿ ಜಾತ್ರೋತ್ಸವದ ಸಂದರ್ಭ ಮಡಿಲ ಸೇವೆಗೆ ಮಂಗಳೂರಿನ ಬಟ್ಟೆ ಅಂಗಡಿ ಹಳೆಯ ಬಟ್ಟೆಗಳನ್ನು ಪೂರೈಸಿದ ಘಟನೆ ನಡೆದಿದ್ದು, ಇಂದು ಮಂಗಳೂರಿನಲ್ಲಿರುವ ಬಟ್ಟೆ ಅಂಗಡಿಯ ಎದುರೇ ಹಳೆಯ ಸೀರೆಗಳನ್ನು ರಾಶಿ ಹಾಕಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಪುಣ್ಯತಾಣವಾದ ಗೆಜ್ಜೆಗಿರಿ ಕ್ಷೇತ್ರದಲ್ಲಿ ಮಾರ್ಚ್ 1 ರಿಂದ 5ರವರೆಗೆ ವರ್ಷಾವಧಿ ಜಾತ್ರಾ ಮಹೋತ್ಸವ ವಿಜ್ರಂಭಣೆಯಿಂದ ನಡೆದಿತ್ತು. ದೇವಸ್ಥಾನದ ಭಕ್ತರು ಹಾಗೂ ಆಡಳಿತ ಮಂಡಳಿ ಆಶಯದಂತೆ ಈ ಭಾರಿ ಇಲ್ಲಿ ತಾಯಿ ದೇಯಿ ಬೈದೆತಿಗೆ ಮಡಿಲ ಸೇವೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಮಡಿಲ ಸೇವೆಗೆ ಮಂಗಳೂರಿನ ಎಂ ಪಿ ಸಿಲ್ಕ್ ಎಂಬ ಬಟ್ಟೆ ಅಂಗಡಿಯಿಂದ ಸೀರೆಗಳನ್ನು ಖರೀದಿ ಮಾಡಲಾಗಿತ್ತು. ಸುಮಾರು 8 ಸಾವಿರಕ್ಕೂ ಅಧಿಕ ಸೀರೆಗಳನ್ನು ಎಂಪಿ ಸಿಲ್ಕ್ ಅಂಗಡಿಯಿಂದ ಖರೀದಿಸಲಾಗಿತ್ತು, ಆದರೆ ಎಂ.ಪಿ ಸಿಲ್ಕ್ ಸಂಸ್ಥೆ 8000 ಸೀರೆಗಳನ್ನು ನೀಡಿದ್ದು ಅದರಲ್ಲಿ 75 % ಉಪಯೋಗಿಸಿದ ಸೀರೆಯೆಂದು ಭಕ್ತರು ಆರೋಪಿಸಿದ್ದಾರೆ. ಈ ಸೀರೆಯ ಮೊತ್ತ 9 ಲಕ್ಷ 78 ಸಾವಿರದ 925 ರೂ.ಬೆಲೆಯಾಗಿದೆ. ಆದರೆ ಇಷ್ಟೊಂದು ಮೊತ್ತಕ್ಕೆ ನೀಡಿದ ಸೀರೆ ಹರಿದು ಹೋಗಿದ್ದು ನೀಡಿದ ಬೆಲೆಗೆ ಸರಿಯಾದ ಉತ್ತಮ ಗುಣಮಟ್ಟದ ಸೀರೆ ನೀಡಬೇಕೆಂದು ಅಂಗಡಿ ಮಾಲೀಕನನ್ನು ತರಾಟೆಗೆ ತೆಗೆದಿದ್ದಾರೆ.

ದೈವದ ಪ್ರಸಾದವೆಂದು ತೆಗೆದುಕೊಂಡ ಹೋಗಿದ್ದ ಮಹಿಳೆಯರು ಮನೆಯಲ್ಲಿ ನೋಡಿದ ವೇಳೆ ಇದು ಹಳೆಯ ಬಟ್ಟೆ ಎಂದು ತಿಳಿದು ಮಹಿಳೆಯರು ಆಕ್ರೋಶಗೊಂಡಿದ್ದರು. ಬಳಿಕ ಈ ಬಗ್ಗೆ ಮಾಲೀಕನಿಗೆ ಈ ಮೊದಲು ಗಮನಕ್ಕೆ ತಂದಿದ್ದು ತಪ್ಪೊಪ್ಪಿಕೊಂಡಿದ್ದರು.
ಇದಕ್ಕೆ ಪರ್ಯಾಯವಾಗಿ ಬೇರೆ ಸೀರೆ ನೀಡುತ್ತೇನೆಂದು ಮಾತು ಕೊಟ್ಟಿದ್ದರು. ಆದರೆ ಪರ್ಯಾಯ ನೀಡಿದ ಸೀರೆ ಕೂಡ ಇತರರು ಉಪಯೋಗಿಸಿದಂತಿದ್ದು, ಸಂತೆಯಲಿ ಮಾರುವ ಹರಿದ ಸೀರೆಯಿಂತಿತ್ತು .ಇದರಿಂದ ಅಂಗಡಿ ಮಾಲಿಕನಿಗೆ ಮನವರಿಕೆ ನೀಡಿದರೂ ಕ್ಯಾರೇ ಎಂದಿಲ್ಲ. ಹೀಗಾಗಿ ಮಂಗಳೂರಿನ ಎಂ.ಪಿ ಸಿಲ್ಕ್ ಅಂಗಡಿ ಮುಂದೆ ಸೀರೆ ರಸ್ತೆಯಲ್ಲಿ ಸುರಿದು ಭಕ್ತರು ಆಕ್ರೋಶ ಹೊರಹಾಕಿದ್ದಾರೆ.