DAKSHINA KANNADA
ಪುತ್ತೂರು – ನಿಷೇಧಾಜ್ಞೆ ಇದ್ದರೂ ಎಸ್ಎಸ್ಎಲ್ ಸಿ ಪರಿಕ್ಷಾ ಕೇಂದ್ರದ ಬಳಿ ಸಿನೆಮಾ ಶೂಟಿಂಗ್

ಪುತ್ತೂರು ಮಾರ್ಚ್ 26: ಎಸ್ಎಸ್ಎಲ್ ಸಿ ಪರೀಕ್ಷಾ ಕೇಂದ್ರದ ಬಳಿ ಸಿನೆಮಾ ಒಂದರ ಶೂಟಿಂಗ್ ನಡೆಯುತ್ತಿದ್ದು, ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಆಗಮಿಸಿ ಚಿತ್ರೀಕರಣ ನಡೆಸದಂತೆ ತಡೆ ನೀಡಿದ ಘಟನೆ ನಡೆದಿದೆ.
ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯುತ್ತಿದ್ದ ಪುತ್ತೂರು ಸಂತ ವಿಕ್ಟರ್ಸ್ ಶಾಲೆಯ ಪಕ್ಕದ ಚರ್ಚ್ ಬಳಿ ಸಿನೆಮಾ ಶೂಟಿಂಗ್ ನಡೆಸಲಾಗುತ್ತಿತ್ತು, ಆದರೆ ಎಸ್ಎಸ್ಎಲ್ ಸಿ ಪರೀಕ್ಷೆ ಹಿನ್ನಲೆ ಪರೀಕ್ಷಾ ಕೇಂದ್ರದ ನಿಷೇಧಾಜ್ಞೆ ಜಾರಿಯಲ್ಲಿದೆ. ಆದರೂ ಸಿನೆಮಾ ಶೂಟಿಂಗ್ ಗೆ ಅವಕಾಶ ನೀಡಲಾಗಿದೆ ಎಂದು ಹೇಳಲಾಗಿದೆ.

ಸಿನೆಮಾ ಶೂಟಿಂಗ್ ನಡೆಯುತ್ತಿರುವ ಬಗ್ಗೆ ದೂರು ಬಂದ ಹಿನ್ನಲೆ ಸ್ಥಳಕ್ಕೆ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಆಗಮಿಸಿ ಶೂಟಿಂಗ್ ನಡೆಸದಂತೆ ತಿಳಿಸಿದ್ದಾರೆ. ಪರೀಕ್ಷಾ ಕೇಂದ್ರ ಮತ್ತು ಚರ್ಚ್ ಒಂದೇ ಆವರಣದೊಳಗೆ ಇರುವ ಕಾರಣ ಈ ಗೊಂದಲ ಏರ್ಪಟ್ಟಿದೆ ಎಂದು ಹೇಳಲಾಗಿದೆ.