KARNATAKA
ಇಬ್ಬರು ಮಕ್ಕಳನ್ನು ಸಾಯಿಸಿ ಆತ್ಮಹತ್ಯೆ ಮಾಡಿಕೊಂಡ ತಾಯಿ…ಮಕ್ಕಳ ಸಾವಿನ ದೃಶ್ಯ ನೋಡಿ ಆತ್ಮಹತ್ಯೆಗೆ ಶರಣಾದ ತಂದೆ..!!
ಬೆಂಗಳೂರು ಅಕ್ಟೋಬರ್ 14: ಇಬ್ಬರು ಮಕ್ಕಳನ್ನು ಸಾಯಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡರೆ.. ಮಕ್ಕಳ ಮೃತದೇಹ ನೋಡಿ ತಂದೆ ಕೂಡ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಲಹಂಕದ ಸಿಂಗನಾಯಕನಹಳ್ಳಿಯ ಯಡಿಯೂರಪ್ಪ ನಗರದಲ್ಲಿ ನಡೆದಿದೆ.
ಮೃತರನ್ನು 38 ವರ್ಷದ ಅವಿನಾಶ್, ಪತ್ನಿ ಮಮತಾ (30) ಮಗಳಾದ ಅಧೀರಾ (5), ಅಣ್ಣಯ್ಯ ಎರಡೂವರೆ ವರ್ಷದ ಮಗು ಎಂದು ಗುರುತಿಸಲಾಗಿದೆ. ಮೊದಲಿಗೆ ಮಕ್ಕಳನ್ನು ಸಾಯಿಸಿದ ತಾಯಿ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
5 ವರ್ಷಗಳಿಂದ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅವಿನಾಶ್, 5 ವರ್ಷದ ಹಿಂದೆ ಕಲಬುರಗಿಯಿಂದ ಬೆಂಗಳೂರಿಗೆ ಕುಟುಂಬ ಸಮೇತ ಬಂದಿದ್ದರು. ಗಂಡನ ಆರ್ಥಿಕ ಸಂಕಷ್ಟದಿಂದ ಪತ್ನಿ ಮಮತಾ ಆತ್ಮಹತ್ಯೆಗೆ ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಮೊದಲಿಗೆ ಇಬ್ಬರು ಮಕ್ಕಳ ಕತ್ತು ಹಿಸುಕಿ ಕೊಂದಿದ್ದು, ನಂತರ ತಾನು ಹಗ್ಗ ಕಟ್ಟಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಗಂಡನಿಗೆ ಕರೆ ಮಾಡಿ ಮಮತಾ ಮಾತನಾಡಿದ್ದಾರೆ.
ರಾತ್ರಿ 9 ಗಂಟೆ ಸುಮಾರಿಗೆ ಅವಿನಾಶ್ ಮನೆಗೆ ವಾಪಸ್ ಬಂದಿದ್ದಾರೆ. ಮತ್ತೊಂದು ಕೀ ಇಂದು ಮನೆ ಬೀಗ ತೆಗೆದು ಒಳ ಹೋದಾಗ ಮಕ್ಕಳನ್ನ ಸಾಯಿಸಿ ಪತ್ನಿ ಆತ್ಮಹತ್ಯೆಗೆ ಶರಣಾಗಿರುವುದು ಪತ್ತೆಯಾಗಿದೆ. ಪತ್ನಿ ಮಕ್ಕಳ ಕೊಲೆ ಕಂಡು ಅವಿನಾಶ್ ಬೆಚ್ಚಿಬಿದ್ದಿದ್ದಾರೆ. ನಂತರ ಪತ್ನಿ ಮೃತದೇಹ ತೆಗೆದು ಅದೇ ಹಗ್ಗಕ್ಕೆ ಅವಿನಾಶ್ ಕೂಡ ನೇಣಿಗೆ ಶರಣಾಗಿದ್ದಾರೆ. ಸದ್ಯ ನಾಲ್ವರ ಮೃತದೇಹಗಳನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಯಲಿದೆ.
You must be logged in to post a comment Login