ಮಂಗಳೂರಿನಲ್ಲಿ ಸಂಭ್ರಮದ ರಂಝಾನ್ ಹಬ್ಬ
ಮಂಗಳೂರು ಜೂನ್ 15: ಮಾನವನನ್ನು ಕೆಡುಕಿನಿಂದ ಒಳಿತಿನೆಡೆಗೆ ಆಹ್ವಾನಿಸುವುದೇ ಪವಿತ್ರ ಕುರಾನ್ ಸಂದೇಶ. ವಿಶ್ವ ಸಮುದಾಯಕ್ಕೆ ಶಾಂತಿ, ಸ್ನೇಹ ಮತ್ತು ಸೌಹರ್ದತೆಯ ಸಂದೇಶವನ್ನು ಸಾರುವ ಈದುಲ್ ಪಿತ್ರ್ ಹಬ್ಬವನ್ನು ಇಂದು ಕರಾವಳಿಯಾದ್ಯಂತ ಆಚರಿಸಲಾಗುತ್ತದೆ. ಕರಾವಳಿಯಲ್ಲಿ ಈದುಲ್ ಫಿತ್ರ್ ಹಬ್ಬದ ಸಡಗರ ಮುಗಿಲು ಮುಟ್ಟಿದೆ.

ರಾಜ್ಯದ ಕರಾವಳಿಯಲ್ಲಿ ಇಂದು ಸಂಭ್ರಮದ ರಂಝಾನ್ ಹಬ್ಬ ಆಚರಣೆ ಮಾಡಲಾಗುತ್ತಿದೆ. ಕೇರಳದ ಕ್ಯಾಲಿಕಟ್ ಸಮುದ್ರ ತೀರದಲ್ಲಿ ನಿನ್ನೆ ಸಂಜೆ ಚಂದ್ರ ದರ್ಶನ ಆದ ಹಿನ್ನೆಲೆಯಲ್ಲಿ ಇಂದು ರಂಜಾನ್ ಆಚರಿಸಲಾಗುತ್ತಿದೆ.ಮಂಗಳೂರಿನ ವಿವಿಧ ಮಸೀದಿಗಳಲ್ಲಿ ರಂಜಾನ್ ನ ವಿಶೇಷ ಪ್ರಾರ್ಥನೆ ಸಲ್ಲಿಸಲಾಯ್ತು.

ಬಾವುಟಗುಡ್ಡೆಯ ಈದ್ಗಾ ಮಸೀದಿಯಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ ಖಾದರ್ ಭಾಗಿಯಾದರು. ಸಾಮೂಹಿಕ ನಮಾಜ್ ನಲ್ಲಿ ಪಾಲ್ಗೊಂಡ ಖಾದರ್, ಸಾರ್ವಜನಿಕರ ಜೊತೆ ಪರಸ್ಪರ ಈದುಲ್ ಫಿತ್ರ್ ಶುಭಾಶಯ ವಿನಿಮಯ ಮಾಡಿಕೊಂಡರು.ಉಡುಪಿ ,ಕಾಸರಗೋಡಿನಲ್ಲೂ ಇಂದೇ ರಂಝಾನ್ ಹಬ್ಬ ಆಚರಣೆ ಮಾಡಲಾಗಿತ್ತಿದೆ.

ಉಳಿದಂತೆ ರಾಜ್ಯಾದ್ಯಂತ ನಾಳೆ ರಂಝಾನ್ ಹಬ್ಬ ಆಚರಣೆ ಇರುತ್ತದೆ. ಒಂದು ತಿಂಗಳ ಉಪವಾಸ ಮಾಡಿದ್ದ ಮುಸ್ಲೀಮರು ನಿನ್ನೆ ಉಪವಾಸ ತೊರೆದು ಇಂದು ಹಬ್ಬ ಆಚರಿಸುತ್ತಿದ್ದಾರೆ.
