LATEST NEWS
ಪ್ರಧಾನಿ ಮೋದಿ ಎಚ್ಚರಿಕೆ ಬೆನ್ನಲ್ಲೆ ಪಾಕಿಸ್ತಾನದಿಂದ ಡ್ರೋನ್ ದಾಳಿ

ಶ್ರೀನಗರ ಮೇ 12: ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಜಮ್ಮು-ಕಾಶ್ಮೀರದ ಸಾಂಬಾದಲ್ಲಿ ಡ್ರೋನ್ ದಾಳಿ ಮುಂದುವರೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಜಮ್ಮು ಮತ್ತು ಕಾಶ್ಮೀರ ಸಾಂಬಾದಲ್ಲಿ ಕತ್ತಲೆಯಾದಾಗ ಭಾರತದ ವಾಯು ರಕ್ಷಣಾ ಪಡೆಗಳು ಪಾಕಿಸ್ತಾನಿ ಡ್ರೋನ್ಗಳನ್ನು ತಡೆಹಿಡಿಯುತ್ತಿದ್ದಂತೆ ಕೆಂಪು ಗೆರೆಗಳು ಮತ್ತು ಸ್ಫೋಟಗಳು ಕೇಳಿಬಂದವು ಎಂದು ಎಎನ್ಐ ಸೇರಿದಂತೆ ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಪ್ರಕಟಿಸಿವೆ.

ಜಮ್ಮು-ಕಾಶ್ಮೀರವಷ್ಟೇ ಅಲ್ಲದೇ ಕಥುವಾ, ಅಮೃತ್ ಸರಗಳಲ್ಲಿಯೂ ಪಾಕ್ ಡ್ರೋನ್ ಗಳು ಭಾರತದ ಮೇಲೆ ದಾಳಿಗೆ ಯತ್ನಿಸಿದ್ದು, ಭಾರತೀಯ ಸೇನೆ ಅವುಗಳನ್ನು ಸಮರ್ಥವಾಗಿ ಎದುರಿಸಿದೆ.
ಪ್ರಧಾನಿ ದೇಶವನ್ನು ಉದ್ದೇಶಿಸಿ ಮಾತನಾಡಿದ ವೇಳೆ ಯಾವುದೇ ಪರಮಾಣು ಬೆದರಿಕೆಗಳು ಅಥವಾ ಬ್ಲ್ಯಾಕ್ಮೇಲಿಂಗ್ ಗಳು ನಮ್ಮ ಮುಂದೆ ನಡೆಯುವುದಿಲ್ಲ ಎಂದು ಒತ್ತಿ ಹೇಳಿದ್ದು, ಭಾರತದಲ್ಲಿ ಭಯೋತ್ಪಾದಕ ದಾಳಿಗಳಿಗೆ ಸೂಕ್ತ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ ಎಂದು ಮೋದಿ ದೇಶದ ಜನತೆಯನ್ನುದ್ದೇಶಿಸಿ ಮಾಡಿದ್ದ ಭಾಷಣದಲ್ಲಿ ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆಯ ಕೆಲವೇ ನಿಮಿಷಗಳಲ್ಲಿ ಪಾಕ್ ಉದ್ಧಟತನ ತೋರಿದ್ದು ಮತ್ತೆ ಭಾರತದ ಪ್ರದೇಶಗಳ ಮೇಲೆ ದಾಳಿಗೆ ಯತ್ನಿಸಿದೆ.