DAKSHINA KANNADA
ಗಾಂಜಾ ಆರೋಪಿ ನಾಪತ್ತೆ ಹಿಂದೆ ಕಸ್ಟಮ್ಸ್ ಅಧಿಕಾರಿಗಳ ಕೈವಾಡ ?

ಮಂಗಳೂರು :ಸೆಪ್ಟಂಬರ್ 17: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಪರಾರಿಯಾಗಿದ್ದ ಅಕ್ರಮ ಗಾಂಜಾ ಸಾಗಾಟ ಪ್ರಕರಣದ ಆರೋಪಿಯನ್ನು ಕಸ್ಟಮ್ಸ್ ಅಧಿಕಾರಿಗಳ ವಿಷೇಶ ತಂಡ ಬಂಧಿಸಿದೆ. ವಿದೇಶಕ್ಕೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಕೇರಳದ ಕಾಸರಗೋಡು ಮಹಮ್ಮದ್ ಹನೀಫ್ ಎಂಬವರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು ಬಂಧಿಸಿದ್ದರು. ಮಂಗಳೂರಿ ನಿಂದ ದೋಹ ಕ್ಕೆ ತೆರಳಲು ಮಂಗಳೂರು ನಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಕಾಸರಗೋಡಿನ ಮಹಮ್ಮದ್ ಹನೀಫ್ ಅವರ ಬ್ಯಾಗ್ ತಪಾಸಣೆ ನಡೆಸಿದಾಗ ಅದರಲ್ಲಿ 3 ಪ್ಯಾಕೆಟ್ ನಲ್ಲಿ ಗಾಂಜಾ ಪತ್ತೆಯಾಗಿತ್ತು. ಬಂಧಿತ ಹನೀಫ್ ಅವರ ಬ್ಯಾಗ್ ನಿಂದ 4.8 ಕಿ ಲೋ ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿತ್ತು. ವಿಮಾನ ನಿಲ್ದಾಣದಲ್ಲಿ ಗಾಂಜಾ ಸಮೇತ ಮಹಮ್ಮದ್ ಹನೀಫ್ ನನ್ನು ವಶಕ್ಕೆಪಡೆದಿದ್ದ ಕಸ್ಟಮ್ಸ್ ಅಧಿಕಾರಿಗಳು, ವಿಮಾನ ನಿಲ್ದಾಣದಲ್ಲಿರುವ ಕಸ್ಟಮ್ಸ್ ಕಚೇರಿಯ ಕೊಠಡಿಯೊಂದರಲ್ಲಿ ವಿಚಾರಣೆ ನಡೆಸುತ್ತಿದ್ದರು.ಈ ಸಂದರ್ಭದಲ್ಲಿ ಇನ್ನೊಂದು ವಿಮಾನ ಬಂದಿಳಿದ ಕಾರಣ ಅಧಿಕಾರಿಗಳು ಮಹಮ್ಮದ್ ಹನೀಫ್ ಅವರನ್ನು ಕೊಠಡಿಯಲ್ಲಿ ಬಿಟ್ಟು ಕರ್ತವ್ಯಕ್ಕೆ ತೆರಳಿದ್ದರು.ಈ ಸಂದರ್ಭ ವನ್ನು ಉಪಯೋಗಿಸಿದ ಹನೀಫ್ ಚಾಣಾಕ್ಷತನದಿಂದ ಪರಾರಿಯಾಗಿದ್ದ. ಹನೀಫ್ ಪರಾರಿಯಾಗುತ್ತಿರುವುದನ್ನು ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿ ಗಮನಿಸಿ ಸಿಐಎಸ್ ಎಫ್ ಭದ್ರತಾ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೆ ಕಸ್ಟಮ್ಸ್ ಅಧಿಕಾರಿಗಳು ಎಚ್ಚತ್ತುಕೊಳ್ಳುವಷ್ಟರಲ್ಲಿ ಹನೀಫ್ ಎಸ್ಕೇಪ್ ಆಗಿದ್ದ. ಈ ಪ್ರಕರಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಬೇಜವ್ದಾರತನ ಭಾರಿ ಟೀಕೆಗೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ ಕಸ್ಟಮ್ಸ್ ಅಧಿಕಾರಿಗಳ ವಿಶೇಷ ತಂಡ ಮಹಮ್ಮದ್ ಹನೀಫ್ ನ್ನು ಕೇರಳದ ಬಂಧಿಸಿ ಕರೆತಂದಿದೆ ಎಂದು ಹೇಳಲಾಗಿದೆ. ಘಟನೆ ನಡೆದ ದಿನ ಕಸ್ಟಮ್ಸ್ ಇಲಾಖೆಯ ವತಿಯಿಂದ ಎಲ್ಲಾ ಮಾದ್ಯಮ ಕಚೇರಿಗಳಿಗೆ ವಾರ್ತಾ ಇಲಾಖೆಯ ಮೂಲಕ ಒಂದು ಪ್ರಕಟಣೆ ರವಾನೆಯಾಗಿತ್ತು .ಈ ತರದ ಯಾವುದೇ ಘಟನೆ ನಡೆದಿಲ್ಲ. ಯಾವುದೇ ಗಾಂಜಾ ಸಾಗಾಟ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿಲ್ಲ ಎಂದು ಪ್ರಕಟನೆ ಹೊರಡಿಸಲಾಗಿತ್ತು. ಆದರೆ ಈಗ ಬಂದಿರುವ ಒಂದು ಮಾಹಿತಿಯ ಪ್ರಕಾರ ಅಕ್ರಮ ಗಾಂಜಾ ಸಾಗಾಟದ ಪ್ರಕರಣದಲ್ಲಿ ಬಂಧಿತನಾಗಿ ನಂತರ ಕಸ್ಟಮ್ಸ್ ಅಧಿಕಾರಿಗಳ ಬೇಜವಾಬ್ದಾರಿ ಯಿಂದ ಪರಾರಿಯಾಗಿದ್ದ ಮೊಹಮ್ಮದ್ ಹನೀಫ್ ನನ್ನ ಕಸ್ಟಮ್ಸ್ ಅಧಿಕಾರಿಗಳ ವಿಶೇಷ ತಂಡ ಬಂಧಿಸಿದೆ. ಈ ಹಿನ್ನೆಲೆಯಲ್ಲಿ ಕಸ್ಟಮ್ಸ್ ಇಲಾಖೆ ಮಾಧ್ಯಮ ಕಚೇರಿಗಳಿಗೆ ಸುಳ್ಳು ಮಾಹಿತಿ ನೀಡಿದ್ದಾದರೂ ಏಕೆ? ಯಾವ ಅಧಿಕಾರಿಗಳ ರಕ್ಷಣೆಗೆ ಕಸ್ಟಮ್ಸ್ ಇಲಾಖೆ ಮುಂದಾಗಿತ್ತು ಎಂಬ ಪ್ರಶ್ನೆ ಉದ್ಭವವಾಗಿದೆ ? ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಕಸ್ಟಮ್ಸ್ ಇಲಾಖೆಯ ಮಂಗಳೂರು ಕಚೇರಿಯಲ್ಲಿ ಎಲ್ಲವೂ ಪಾರದರ್ಶಕವಾಗಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಮಂಗಳೂರು ಕಸ್ಟಮ್ಸ್ ಇಲಾಖೆಯ ಕಾರ್ಯವೈಖರಿ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕಾದ ಅವಶ್ಯಕತೆ ಇದೆ.