LATEST NEWS
ಉಡುಪಿಯಲ್ಲಿ ಪತ್ರಕರ್ತರಿಗೆ ಕೊರೋನಾ ವ್ಯಾಕ್ಸಿನೇಶನ್ ಕ್ಯಾಂಪ್

ಉಡುಪಿ, ಮೇ 12: ಕರ್ನಾಟಕದ ಪತ್ರಕರ್ತರು ಮತ್ತು ಮಾಧ್ಯಮದವರನ್ನು ರಾಜ್ಯ ಸರಕಾರ ಕೊರೊನಾ ಫ್ರಂಟ್ ಲೈನ್ ವಾರಿಯರ್ಸ್ ಎಂಬುದಾಗಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಕೋವಿಶೀಲ್ಡ್ ಲಸಿಕೆ ನೀಡಲಾಯ್ತು.
ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಉಡುಪಿ ಜಿಲ್ಲೆಯ ಪತ್ರಕರ್ತರಿಗೆ ಕೋವಿಶೀಲ್ಡ್ ಮೊದಲ ಡೋಸನ್ನು ನೀಡುವ ಲಸಿಕೆ ಅಭಿಯಾನ ಇಂದು ನಡೆಯಿತು.

ಉಡುಪಿಯ ಬ್ರಹ್ಮಗಿರಿ ಪ್ರೆಸ್ಕ್ಲಬ್ ಸಮೀಪದ ಐಎಂಎ ಭವನದಲ್ಲಿ ಉಚಿತ ಲಸಿಕೆ ನೀಡುವ ಕಾರ್ಯಕ್ಕೆ ಬೆಳಿಗ್ಗೆ ಚಾಲನೆ ನೀಡಲಾಯಿತು. ಉಡುಪಿ ಡಿಎಚ್ಒ ಡಾ. ಸುಧೀರ್ ಚಂದ್ರಚೂಡ, ಲಸಿಕಾ ನೋಡೆಲ್ ಅಧಿಕಾರಿ ಡಾ. ಎಂ.ಜಿ. ರಾಮ, ಅಭಿಯಾನ ಸಂದರ್ಭದಲ್ಲಿ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಉಡುಪಿ ನಗರ, ಕಾರ್ಕಳ,ಕುಂದಾಪುರ, ಬ್ರಹ್ಮಾವರ ,ಹೆಬ್ರಿ,ಕಾಪು ಸಹಿತ ಜಿಲ್ಲೆಯ 128 ಜನ ಪತ್ರಕರ್ತರು ಈ ಲಸಿಕೆ ಅಭಿಯಾನದಲ್ಲಿ ಭಾಗವಹಿಸಿ ಲಸಿಕೆ ಪಡೆದುಕೊಂಡರು. ಈಗಾಗಲೇ ಕೋವಿಶೀಲ್ಡ್ ಒಂದನೇ ಡೋಸ್ ಪಡೆದು ಅವಧಿ ಮೀರಿದವರಿಗೂ ಎರಡನೇ ಡೋಸ್ ಪಡೆಯಲು ಇಲ್ಲಿ ಅವಕಾಶ ಕಲ್ಪಿಸಲಾಯಿತು.
ಉಡುಪಿ ಜಿಲ್ಲಾಡಳಿತ ಆರೋಗ್ಯ ಇಲಾಖೆ ಮತ್ತು ಲಸಿಕಾ ಅಭಿಯಾನಕ್ಕೆ ಸಹಕರಿಸಿದ ಐಎಂಎ ಅಧ್ಯಕ್ಷರು ಸದಸ್ಯರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಕೃತಜ್ಞತೆ ಸಲ್ಲಿಸಿದ್ದಾರೆ.