Connect with us

    DAKSHINA KANNADA

    ಕಾಂಗ್ರೆಸ್ ನನ್ನನ್ನು ಅಪಹರಿಸಿ ನಾಮಪತ್ರ ವಾಪಾಸ್ ಪಡೆಯಲು ಬೆದರಿಸಿದ್ದಾರೆ: ಉಳ್ಳಾಲ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕುಂಪಲ ಆರೋಪ..!

    ಮಂಗಳೂರು, ಎಪ್ರಿಲ್ 24 : ಮಂಗಳೂರು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಪಕ್ಷದಿಂದ ಕಣಕ್ಕಿಳಿಸಿದ್ದ ನನ್ನನ್ನು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ತಂಡವೊಂದು ಅಪಹರಿಸಿ ಕರೆದೊಯ್ದು ಬಲವಂತವಾಗಿ ನಾಮಪತ್ರ ಹಿಂತೆಗೆಯುವಂತೆ ಮಾಡಿದ್ದಾರೆ ಎಂದು ಮಂಗಳೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕುಂಪಲ ಆರೋಪಿಸಿದ್ದಾರೆ.

    “ನಾನು ಎಲ್ಲೂ ಓಡಿಹೋಗಿಲ್ಲ, ನನ್ನನ್ನು ಅಪಹರಿಸಿ ಬೆದರಿಸಿ ನನ್ನಿಂದ ನಾಮಪತ್ರ ಹಿಂದೆ ಪಡೆಯುವಂತೆ ಮಾಡಲಾಗಿದೆ. ನನಗೆ ಯಾವುದೇ ರೀತಿಯಲ್ಲಿ ಆಮಿಷ ಒಡ್ಡಲಾಗಿಲ್ಲ. ಈ ಕುರಿತು ಪೊಲೀಸ್ ಕಮಿಷನರ್ ಅವರಿಗೆ ಭದ್ರತೆ ನೀಡುವಂತೆ ಮನವಿ ಮಾಡಲಾಗಿದೆ” ಎಂದರು.

    ಬಳಿಕ ಮಾತಾಡಿದ ಜೆಡಿಎಸ್ ರಾಜ್ಯ ವಕ್ತಾರ ಎಂ.ಬಿ. ಸದಾಶಿವ ಅವರು, “ಈ ಬಾರಿ ಯಾರ ಸಹಾಯವೂ ಇಲ್ಲದೆ ಸ್ವತಂತ್ರವಾಗಿ ನಮ್ಮ ಜೆಡಿಎಸ್ ಪಕ್ಷ ಅಸ್ತಿತ್ವಕ್ಕೆ ಬರಲಿದೆ. ನಾವು ಜನಪರವಾದ ಪಂಚರತ್ನ ಯೋಜನೆಯ ಮೂಲಕ ಜನರ ಮನಸಿಗೆ ಹತ್ತಿರವಾಗಿದ್ದೇವೆ.

    ಜೆಡಿಎಸ್ ಹೇಳಿರುವ ಜನಪರ ಕಾರ್ಯಕ್ರಮವನ್ನು ಆಡಳಿತಕ್ಕೆ ಬರುವ ಮರುಕ್ಷಣವೇ ಜಾರಿಗೆ ತರಲು ನಾವು ಸಿದ್ಧರಿದ್ದೇವೆ. ಜನರ ಮಧ್ಯೆ ಗೊಂದಲ, ವೈಷಮ್ಯ ಮೂಡಿಸುವ ರಾಜಕೀಯ ನಾವು ಎಂದಿಗೂ ಮಾಡಿಲ್ಲ. ಕುಮಾರಸ್ವಾಮಿ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದು ನಿಶ್ಚಿತ.

    ಜಿಲ್ಲೆಯಲ್ಲಿ 8 ಕಡೆಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು ಮಂಗಳೂರು ಉತ್ತರ ಕ್ಷೇತ್ರದಲ್ಲಿ ಮಾಜಿ ಶಾಸಕ, ಕಾಂಗ್ರೆಸ್ ಹಿರಿಯ ಮುಖಂಡ ಮೊಯಿದೀನ್ ಬಾವಾ ಅವರನ್ನು ಕಣಕ್ಕಿಳಿಸಿದ್ದು ಗೆಲ್ಲುವ ವಿಶ್ವಾಸ ನಮ್ಮಲ್ಲಿದೆ. ವಿಷಾದದ ಸಂಗತಿ ಏನೆಂದರೆ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಹಾಕಿದ್ದೆವು.

    ಮಂಗಳೂರು ಕ್ಷೇತ್ರದಲ್ಲಿ ಜನಸಾಮಾನ್ಯರಿಗೆ ಬೇಕಾದ ಅಲ್ತಾಫ್ ಕುಂಪಲ ಎಂಬ ಒಬ್ಬ ವ್ಯಕ್ತಿಯನ್ನು ಅವರ ಸಮಾಜಸೇವೆಯನ್ನು ಗುರುತಿಸಿ ಟಿಕೆಟ್ ನೀಡಿದ್ದೇವೆ. ಆದರೆ ಎರಡು ದಿನಗಳ ಹಿಂದೆ ಅವರು ಹಬ್ಬದ ದಿನ ಮಸೀದಿಯಿಂದ ಹೊರಬರುವಾಗ ತಂಡವೊಂದು ಅವರನ್ನು ಬೆದರಿಸಿ ಚುನಾವಣಾಧಿಕಾರಿಯ ಬಳಿಗೆ ಕರೆದೊಯ್ದು ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮಾಡಲಾಯಿತು.

    ಇದು ಎಲ್ಲರೂ ಚಿಂತಿಸಬೇಕಾದ ವಿಷಯವಾಗಿದೆ. ಯಾಕೆಂದರೆ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನೇ ಎದುರಿಸಲಾಗದವರು ಸಮಾಜದ ಜನರನ್ನು ಹೇಗೆ ನಡೆಯಿಸಿಕೊಳ್ಳಬಹುದು?” ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ನಜೀರ್ ಉಳ್ಳಾಲ್, ವಸಂತ ಪೂಜಾರಿ, ಅಶ್ರಫ್ ಸಾಜೀದ್, ಆಶ್ರಪ್ ಖಾಜಿ, ಯುವ ಜನತಾದಳದ ಅಕ್ಷಿತ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply