ಬೆಂಗಳೂರು, ಜುಲೈ 31: ಗಾಂಧಿನಗರದಲ್ಲಿ ಹೊಸ ವಿಚಾರವೊಂದು ಸಖತ್ ಸೌಂಡ್ ಮಾಡುತ್ತಿದೆ. ಸುದೀಪ್ ಮತ್ತು ರಕ್ಷಿತ್ ಶೆಟ್ಟಿ ನಡುವೆ ಗೆಳೆತನ ಸರಿಯಿಲ್ಲ. ಇವರಿಬ್ಬರ ಮಧ್ಯೆ ಕೋಲ್ಡ್‌ ಫೈಟ್ ನಡೆಯುತ್ತಿದೆ ಎಂದು ಈ ಕುರಿತು ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ಒಂದು ಕಡೆ `ವಿಕ್ರಾಂತ್ ರೋಣ’ ಸಿನಿಮಾ ಯಶಸ್ಸಿನೆಡೆಗೆ ಸಾಗುತ್ತಿದ್ದರೆ ಇನ್ನೊಂದೆಡೆ ಸುದೀಪ್ ಹಾಗೂ ರಕ್ಷಿತ್ ಹೊಸ ಸಿನಿಮಾದ ಬಗ್ಗೆಯೂ ಚರ್ಚೆ ಕೇಳಿ ಬರುತ್ತಿದೆ. ಸುದೀಪ್‌ಗಾಗಿ ತಾವೊಂದು ಸಿನಿಮಾ ಮಾಡುವುದಾಗಿ ಈ ಹಿಂದೆ ರಕ್ಷಿತ್ ಘೋಷಿಸಿದ್ದರು. ಈ ಬಗ್ಗೆ ಇದೀಗ ಮಾತನಾಡಿರುವ ಸುದೀಪ್, ಸಿನಿಮಾ ವಿಷಯವಾಗಿ ರಕ್ಷಿತ್ ಶೆಟ್ಟಿ ತಮ್ಮೊಂದಿಗೆ ಜಗಳವಾಡಿದ್ದಾಗಿಯೂ ಹೇಳಿದ್ದಾರೆ. ಇದನ್ನನವರು ಕೋಲ್ಡ್ ಫೈಟ್ ಅಂತ ಕರೆದಿದ್ದಾರೆ. ಈ ಶೀತಲ ಸಮರಕ್ಕೆ ಕಾರಣ ಕಥೆಯಲ್ಲಿ ಇಬ್ಬರಿಗೂ ಬಂದಿರುವ ಭಿನ್ನಾಭಿಪ್ರಾಯವಂತೆ.

ವಿಕ್ರಾಂತ್ ರೋಣ’ ಪ್ರಚಾರದ ವೇಳೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಸುದೀಪ್, ರಕ್ಷಿತ್ ಶೆಟ್ಟಿ ಬಹಳ ಒಳ್ಳೆಯ ಹುಡುಗ. ಆದರೆ ಸಿನಿಮಾ ಕುರಿತಂತೆ ನನ್ನ ಜೊತೆ ಕೋಲ್ಡ್ ಫೈಟ್ ಅವರಿಗಿದೆ. ಆದರೆ ಆತ ಅದನ್ನು ತೋರಿಸಿಕೊಳ್ಳುವುದಿಲ್ಲ. ನನಗೂ ಕೆಲವು ಅಭಿಪ್ರಾಯ ಬೇಧಗಳಿವೆ. ನನಗೆ ರಕ್ಷಿತ್ ಬರವಣಿಗೆ ಬಗ್ಗೆ ಹೆಮ್ಮೆ ಇದೆ, `777 ಚಾರ್ಲಿ’ ಸಿನಿಮಾದ ಬಳಿಕ ಅವರ ನಟನೆಯ ಬಗ್ಗೆಯೂ ಖುಷಿ ಎನಿಸುತ್ತದೆ ಎಂದು ನಟ ಸುದೀಪ್ ಹೊಗಳಿದ್ದಾರೆ.

ಸುದೀಪ್‌ಗಾಗಿ ಸಿನಿಮಾ ನಿರ್ದೇಶನ ಮಾಡುವುದಾಗಿ ಈ ಹಿಂದೆಯೇ ರಕ್ಷಿತ್ ಶೆಟ್ಟಿ ಹೇಳಿದ್ದರು. ಈ ಚಿತ್ರದ ಒನ್ ಲೈನ್ ಕಥೆ‌ ಕೂಡ ಕಿಚ್ಚನಿಗೆ ತುಂಬಾ ಇಷ್ಟವಾಗಿತ್ತು. ಆದರೆ ಈಗ ಕಥೆ ಬಗ್ಗೆ ಸಮಾನ ಅಭಿಪ್ರಾಯಕ್ಕೆ ಬರಲಾಗದ ಕಾರಣ ತಾತ್ಕಾಲಿಕವಾಗಿ ಬ್ರೇಕ್ ಕೊಡಲಾಗಿದೆ.

Share Information