ಟಾಯ್ಲೆಟ್ ಗಲಾಟೆಯಲ್ಲಿ ಮಂಗಳೂರನ್ನು ಪಾಕಿಸ್ತಾನ ಎಂದು ಯುವಕರಿಂದ ಹಲ್ಲೆ
ಮಂಗಳೂರು ಅಕ್ಟೋಬರ್ 12: ಹೋಟೆಲ್ ನ ಶೌಚಾಲಯವನ್ನು ಉಪಯೋಗಿಸಲು ಆಕ್ಷೇಪಿಸಿದ್ದಕ್ಕೆ ಹೋಟೆಲ್ ಮ್ಯಾನೇಜರ್ ಸೇರಿದಂತೆ ಇಬ್ಬರ ಮೇಲೆ ತಂಡ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ಸರ್ಕಾರಿ ಬಸ್ ನಿಲ್ದಾಣ ಎದುರು ಇರುವ ಪಂಚಮಿ ಹೋಟೆಲ್ ಶೌಚಾಲಯವನ್ನು ಸಮೀಪದ ಮೊಬೈಲ್ ಸರ್ವಿಸ್ ಅಂಗಡಿಯ ಸಿಬ್ಬಂದಿಗಳು ಬಳಸುತ್ತಿದ್ದರು.

ಇದನ್ನು ಆಕ್ಷೇಪಿಸಿದ ಹೋಟೆಲ್ ಮ್ಯಾನೇಜರ್ ಪ್ರಸನ್ನ ಎಂಬುವರ ಮೇಲೆ ಆರು ಜನರ ಯುವಕರ ತಂಡ ದಾಳಿ ನಡೆಸಿದೆ. ಹಲ್ಲೆಯನ್ನು ತಡೆಯಲು ತೆರಳಿದ ಸೆಕ್ಯೂರಿಟಿ ಸಿಬ್ಬಂದಿಗೆ ಮೇಲೂ ತಂಡ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಹೋಟೆಲ್ ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿ ಜನ ಸೇರಿದ್ದಾರೆ.
ಹಲ್ಲೆ ನಡೆಸಿದ ತಂಡದ ವಿರುದ್ಧ ಸ್ಥಳೀಯ ಅಂಗಡಿಯವರು ತಿರುಗಿಬಿದ್ದಾರೆ. ಏಕಾಏಕಿ ಹೋಟೆಲ್ ಗೆ ನುಗ್ಗಿ ಹಲ್ಲೆ ನಡೆಸಲು ಇದೇನು ಪಾಕಿಸ್ತಾನವೇ ಎಂದು ಕೇಳಿದ್ದಾರೆ. ಅದಕ್ಕೆ ಯುವಕರ ತಂಡ ಹೌದು ಇದು ಪಾಕಿಸ್ತಾನ ಎಂದು ಹೇಳಿ ಪರಾರಿಯಾಗಿದೆ. ಹಲ್ಲೆ ನಡೆಸಿದ ತಂಡ ಪರಾರಿಯಾಗುತ್ತಿರುವ ಸಂದರ್ಭದಲ್ಲಿ ಸ್ಥಳೀಯರು ತಂಡದಲ್ಲಿದ್ದ ಯುವಕನೊಬ್ಬನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಉರ್ವ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.