Connect with us

    KARNATAKA

    ಮಂಗಳೂರು ಬಳಿಕ ದಾವಣಗೆರೆಯಲ್ಲಿ ಚಡ್ಡಿಗ್ಯಾಂಗ್ – ಒಂದೇ ದಿನ 6 ಮನೆ 2 ದೇವಸ್ಥಾನದಲ್ಲಿ ಕಳ್ಳತನ

    ಮಂಗಳೂರು ಜುಲೈ 23: ಮಂಗಳೂರಿನಲ್ಲಿ ಭಾರೀ ಸಂಚಲನ ಸೃಷ್ಠಿಸಿ ಜನರ ನಿದ್ದೆಗೆಡಿಸಿದ ಚಡ್ಡಿಗ್ಯಾಂಗ್ ಇದೀಗ ದಾವಣಗೆರೆಯಲ್ಲಿ ಸಕ್ರಿಯವಾಗಿದೆ. ಒಂದೇ ದಿನ 6 ಮನೆ ಹಾಗೂ 2 ದೇವಸ್ಥಾನಗಳಲ್ಲಿ ಸರಣಿ ಕಳ್ಳತನ ಮಾಡಿದೆ. ಚಡ್ಡಿ ಗ್ಯಾಂಗ್ ನ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.


    ಮಂಗಳೂರಿನಲ್ಲಿ ಚಡ್ಡಿಗ್ಯಾಂಗ್ ಕಳ್ಳತನ ಮತ್ತು ದರೋಡೆಗೆ ಜನ ಬೆಚ್ಚಿಬಿದ್ದಿದ್ದರು, ಬಳಿಕ ಪೊಲೀಸರು ಮಂಗಳೂರಿನಲ್ಲಿರುವ ಚಡ್ಡಿ ಗ್ಯಾಂಗ್ ನ್ನು ಅರೆಸ್ಟ್ ಮಾಡಿ ಜನ ನಿಟ್ಟುಸಿರುವ ಬಿಡುವಂತೆ ಮಾಡಿದ್ದರು. ಆದರೆ ಇದೀಗ ಚಡ್ಡಿ ಗ್ಯಾಂಗ್ ಮಂಗಳೂರು ಬಿಟ್ಟು ದಾವಣಗೆರೆಯಲ್ಲಿ ಸಕ್ರಿಯವಾಗಿದೆ. ಚಡ್ಡಿಗ್ಯಾಂಗ್‍ನ ಚಲನವಲನಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳ್ಳರ ಗ್ಯಾಂಗ್ ಚಡ್ಡಿ, ಟೀ ಶರ್ಟ್ ಧರಿಸಿ ರಾತ್ರಿ ವೇಳೆ ಬೀದಿ ಬೀದಿಗಳಲ್ಲಿ ತಿರುಗಾಟ ನಡೆಸಿ ಇಡೀ ಪಟ್ಟಣವನ್ನು ಸುತ್ತಾಡಿದೆ. ಬಳಿಕ ನ್ಯಾಮತಿ ಪಟ್ಟಣದ ಕಾಳಮ್ಮ ಬೀದಿಯ ಕಾಳಮ್ಮ ದೇವಸ್ಥಾನದ ಬೀಗ ಒಡೆದು ಒಂದು ತೊಲ ತಾಳಿ, ನಂತರ ನೆಹರೂ ರಸ್ತೆಯಲ್ಲಿರುವ ಮೂಕಾಂಬಿಕ ದೇಗುಲದ ಹುಂಡಿ ಒಡೆದು ಹಣ ದೋಚಿದ್ದಾರೆ.


    ಇಷ್ಟೇ ಅಲ್ಲದೇ ಮರಿಡೇರ ಹೊಸಮನೆ ರಾಜಪ್ಪ ಎಂಬವರ ಮನೆಯ ಬೀರುವಿನಲ್ಲಿದ್ದ ಐದು ತೊಲದ ಬಂಗಾರ ಹಾಗೂ ನಗದು, ಮಾರಿಗುಡಿ ಬೀದಿಯ ಸಾವಿತ್ರಮ್ಮ ಎಂಬವರ ಮನೆಯಲ್ಲಿ 80 ಸಾವಿರ ನಗದು, ವಿಶ್ವೇಶ್ವರಯ್ಯ ಬೀದಿಯ ಗಡೇಕಟ್ಟೆ ಯಶೋಧಮ್ಮ ಎಂಬವರ ಮನೆಯಲ್ಲಿ 200 ಗ್ರಾಂ ಬೆಳ್ಳಿಯ ಆಭರಣ ಹಾಗೂ 15 ಸಾವಿರ ಹಣ ದೋಚಿದ್ದಾರೆ.

    ಇನ್ನೂ ಶಿವಾನಂದಪ್ಪ ಬಡಾವಣೆಯ ಹಾಗೂ ಚಂದ್ರಹಾಸ್ ಬಡಾವಣೆಯಲ್ಲಿ ತಲಾ ಒಂದು ಮನೆ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಮನೆಯಲ್ಲಿ ಯಾರು ಇಲ್ಲದೇ ಇರುವುದನ್ನು ಖಚಿತ ಪಡಿಸಿಕೊಂಡ ಕಳ್ಳರು ಅಕ್ಕಪಕ್ಕದ ಮನೆಯ ಬಾಗಿಲುಗಳ ಚಿಲಕಿ ಹಾಕಿ ನಂತರ ಬೀಗ ಒಡೆದು ಕಳ್ಳತನ ಮಾಡಿದ್ದಾರೆ.
    ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply