LATEST NEWS
ಕಾಂಗ್ರೆಸ್ ಸರ್ಕಾರದಲ್ಲಿ ನಿಯಂತ್ರಣವಿಲ್ಲದ ಬೆಲೆಯೇರಿಕೆ ವಿರುದ್ಧ ಏಪ್ರಿಲ್ 9 ಕ್ಕೆ ಬಿಜೆಪಿಯಿಂದ ದ.ಕ ಜಿಲ್ಲೆಯಲ್ಲಿ ಜನಾಕ್ರೋಶ ಯಾತ್ರೆ

ಮಂಗಳೂರು ಎಪ್ರಿಲ್ 07: ರಾಜ್ಯದಲ್ಲಿ ಕಳೆದ 20 ತಿಂಗಳಿನಿಂದಲೂ ನಿರಂತರ ಬೆಲೆ ಏರಿಕೆ, ದಲಿತರ ಹಣ ಲೂಟಿ, ಹಿಂದೂ ವಿರೋಧಿ ನೀತಿ, ಮುಸ್ಲಿಂ ಓಲೈಕೆ, ರೈತರ ನಿರ್ಲಕ್ಷ್ಯ ಹೀಗೆ ಸಾಲು ಸಾಲು ವೈಫಲ್ಯಕ್ಕೀಡಾಗಿರುವ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಇಡೀ ರಾಜ್ಯದ ಜನತೆ ಬೇಸತ್ತಿದ್ದು ಅಂತಹ ಜನ ವಿರೋಧಿ ಆಡಳಿತ ನೀಡುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವತಿಯಿಂದ ಇಂದಿನಿಂದ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆಯು ಆರಂಭಗೊಂಡಿದ್ದು ಏಪ್ರಿಲ್ 9ನೇ ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ತಿಳಿಸಿದರು.
ನಗರದ ಅಟಲ್ ಸೇವಾ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕರು, ಜನತೆಯಲ್ಲಿ ಮಡುಗಟ್ಟಿರುವ ಆಕ್ರೋಶದ ಬಿಸಿಯನ್ನು ಭ್ರಷ್ಟ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮುಟ್ಟಿಸುವ ಭಾಗವಾಗಿ ಏಪ್ರಿಲ್ 9 ರಂದು ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಮಂಗಳೂರಿನ ಅಂಬೇಡ್ಕರ್ ಸರ್ಕಲ್ ನಿಂದ ಕ್ಲಾಕ್ ಟವರ್ ವರೆಗೆ ಜನಾಕ್ರೋಶ ಯಾತ್ರೆ ನಡೆಯಲಿದ್ದು ಈ ಬೃಹತ್ ಪಾದಯಾತ್ರೆಯಲ್ಲಿ ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ಬಿ.ವೈ ವಿಜಯೇಂದ್ರ, ಆರ್ ಅಶೋಕ್, ಛಲವಾದಿ ನಾರಾಯಣ ಸ್ವಾಮಿ, ಅಶ್ವಥ್ ನಾರಾಯಣ್, ಸಿ.ಟಿ ರವಿ, ನಳಿನ್ ಕುಮಾರ್ ಕಟೀಲ್, ಬ್ರಿಜೇಶ್ ಚೌಟ, ಸಹಿತ ಅನೇಕ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದು ಈಗಾಗಲೇ ಈ ಹೋರಾಟದ ಯಶಸ್ಸಿಗೆ ಅಗತ್ಯವಿರುವ ಸಕಲ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದೆ ಎಂದರು.

ನಾಡಿನ ಜನತೆಗೆ ಕಾಂಗ್ರೆಸ್ ಸರ್ಕಾರದಲ್ಲಿ ನಿಯಂತ್ರಣವಿಲ್ಲದ ಬೆಲೆಯೇರಿಕೆಯಿಂದಾಗಿ ಜನರಿಗಾಗುತ್ತಿರುವ ಅನ್ಯಾಯ, ಹದಗೆಟ್ಟ ಕಾನೂನು ಸುವ್ಯವಸ್ಥೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಮಿತಿಮೀರಿದ ತುಷ್ಟಿಕರಣ, ಹೀಗೆ ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯ ಹಿಂದೆಂದೂ ಕಂಡಿರದಂತಹ ದುರಾಡಳಿತವನ್ನು ಕಾಂಗ್ರೆಸ್ ಸರ್ಕಾರ ನೀಡಿದೆ. ಒಂದು ಅಸಮರ್ಥ ಸರ್ಕಾರದ ವಿರುದ್ಧ ಜನರು ಆಕ್ರೋಶಗೊಳ್ಳಲು ಇದಕ್ಕಿಂತ ಇನ್ನೇನು ಬೇಕು? ಆ ನಿಟ್ಟಿನಲ್ಲಿ ಇದೀಗ ಜನತೆಯ ನೋವಿಗೆ ಧ್ವನಿಯಾಗಿ ಬಿಜೆಪಿ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿದ್ದು ಬೆಲೆಯೇರಿಕೆಯಿಂದಾಗಿ ತೊಂದರೆ ಅನುಭವಿಸುತ್ತಿರುವ ಎಲ್ಲಾ ವರ್ಗದವರು, ದಲಿತ ಬಂಧುಗಳು, ಬಿಜೆಪಿಯ ಎಲ್ಲಾ ಕಾರ್ಯಕರ್ತರ ಸಹಿತ ಸಾರ್ವಜನಿಕರೆಲ್ಲರೂ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠವನ್ನು ಕಲಿಸಲು ಸಹಕರಿಸುವಂತೆ ಶಾಸಕರು ವಿನಂತಿಸಿದರು.