BELTHANGADI
ಬೆಳ್ತಂಗಡಿ – ರಾಮೋತ್ಸವಕ್ಕೆ ಬಂದ ಪುನೀತ್ ಕೆರೆಹಳ್ಳಿ ಮತ್ತು ಸಂಗಡಿಗರನ್ನು ವಾಪಾಸ್ ಕಳುಹಿಸಿದ ಪೊಲೀಸರು

ಬೆಳ್ತಂಗಡಿ ಎಪ್ರಿಲ್ 19: ಉಜಿರೆಯಲ್ಲಿ ನಡೆಯುತ್ತಿರುವ ರಾಮಮೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪುನೀತ್ ಕೆರೆಹಳ್ಳಿ ಹಾಗೂ ಅವರ ಸಂಗಡಿಗರನ್ನು ಬೆಳ್ತಂಗಡಿ ಪೊಲೀಸರು ವಾಪಾಸ್ ಕಳುಹಿಸಿದ್ದಾರೆ.
ಸೌಜನ್ಯ ಪರ ಹೊರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲಿಗರು ಹಾಗೂ ಪುನೀತ್ ಕೆರೆಹಳ್ಳಿ ಬೆಂಬಲಿಗರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಮಾತಿನ ಸಮರ ನಡೆದಿತ್ತು. ಪುನೀತ್ ಕೆರೆಹಳ್ಳಿ ಉಜಿರೆಗೆ ಬಂದರೆ ಗಲಭೆಯಾಗುವ ಸಾಧ್ಯತೆಯಿದ್ದು, ಇದನ್ನು ಗಮನಿಸಿದ ಬೆಳ್ತಂಗಡಿ ಪೊಲೀಸರು ಪುನೀತ್ ಕೆರೆಹಳ್ಳಿಗೆ ಉಜಿರೆಗೆ ಪ್ರವೇಶ ನಿಷೇಧಿಸಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಯವರು ಅದೇಶ ಹೊರಡಿಸಿದ್ದರು. ಇಂದು ಉಜಿರೆಯ ಕೃಷ್ಣಾನುಗ್ರಹದ ಸಭಾಭವನದಲ್ಲಿ ಸಂಜೆ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸೂಲಿಬೆಲೆ ಆಗಮಿತಿ ಭಾಷಣ ಮಾಡಲಿದ್ದು, ಈ ಕಾರ್ಯಕ್ರಮ ವೀಕ್ಷಿಸಲು ಪುನೀತ್ ಕೆರೆಹಳ್ಳಿ ಬರುತ್ತಿದ್ದ ವೇಳೆ ಬೆಳ್ತಂಗಡಿ ಪೊಲೀಸರು ಉಜಿರೆಯ ಕಾಲೇಜ್ ರಸ್ತೆಯಲ್ಲಿ ಅಡ್ಡಹಾಕಿ ದಕ್ಷಿಣ ಕನ್ನಡ ಪ್ರವೇಶ ನಿಷೇಧ ಮಾಡಿದ ಡಿಸಿ ಆದೇಶ ತೋರಿಸಿ ಹಿಂದಕ್ಕೆ ಕಳುಹಿಸಿದ್ದಾರೆ. ಈ ವೇಳೆ ಪುನೀತ್ ಕೆರೆಹಳ್ಳಿ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಮಹೇಶ್ ಶೆಟ್ಟಿ ಬೆಂಬಲಿಗರು ಈ ಸ್ಥಳಕ್ಕೆ ಆಗಮಿಸಿದ್ದು, ಪುನೀತ್ ಕೆರೆಹಳ್ಳಿ ವಿರುದ್ದ ಘೋಷಣೆ ಕೂಗಿದರು. ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಪರಿಸ್ಥಿತಿ ನಿಭಾಯಿಸಿದ್ದಾರೆ.
